ADVERTISEMENT

ಸೆ.18ರಂದು ಜಿಲ್ಲಾ ಮಟ್ಟದ ವಿದ್ಯಾರ್ಥಿ ಚಿತ್ರಕಲಾ ಸ್ಪರ್ಧೆ

ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಿಂದ ಗದುಗಿನಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 11:36 IST
Last Updated 14 ಸೆಪ್ಟೆಂಬರ್ 2019, 11:36 IST
ಚಂದ್ರಕಾಂತ ಬೆಲ್ಲದ
ಚಂದ್ರಕಾಂತ ಬೆಲ್ಲದ   

ಗದಗ: ‘ಧಾರವಾಡದ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಗದುಗಿನ ವಿಜಯ ಕಲಾ ಮಂದಿರ, ಚಿತ್ರಕಲಾ ಶಿಕ್ಷಕರ ಸಂಘ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಸೆ.18 ರಂದು ನಗರದ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ’ ಎಂದು ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬನ್ನಿ ಮಕ್ಕಳ ಕನಸುಗಳಿಗೆ ಬಣ್ಣ ತುಂಬೋಣ’ ಎಂಬ ಶೀರ್ಷಿಕೆಯಡಿ ಈ ಸ್ಪರ್ಧೆ ನಡೆಯಲಿದ್ದು, ಜಿಲ್ಲೆಯ 1500 ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ತಲಾ 15 ಹಾಗೂ ಕಾಲೇಜು ವಿಭಾಗದಲ್ಲಿ 5 ಸೇರಿ ಒಟ್ಟು 35 ವಿದ್ಯಾರ್ಥಿ ಕಲಾವಿದರಿಗೆ ತಲಾ ₹1 ಸಾವಿರ ನಗದು ಬಹುಮಾನ ನೀಡಲಾಗುವುದು, ಇನ್ನುಳಿದ ಎಲ್ಲ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು’ ಎಂದರು.

ಸೆ.18ರಂದು ಬೆಳಿಗ್ಗೆ 10 ಗಂಟೆಗೆ ಸಚಿವ ಸಿ.ಸಿ. ಪಾಟೀಲ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡುವರು. ಡಿಡಿಪಿಯು ಎಸ್.ಎಸ್. ಹಿರೇಮಠ, ಡಿಡಿಪಿಐ ಎನ್.ಎಚ್. ನಾಗೂರ, ಡಯಟ್ ಉಪನಿರ್ದೇಶಕ ಎಚ್.ಎಂ. ಖಾನ್, ವಸಂತ ಅಕ್ಕಿ, ಕೆ.ವಿ. ಕುಂದಗೋಳ, ಡಾ.ಜಿ.ಬಿ. ಪಾಟೀಲ ಭಾಗವಹಿಸುವರು. ಅಂದು ಮಧ್ಯಾಹ್ನ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುವರು’ ಎಂದರು.

ADVERTISEMENT

ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಮಂಜುಳಾ ಎಲಿಗಾರ, ವಿಜಯ ಕಲಾ ಮಂದಿರದ ಪ್ರಾಚಾರ್ಯ ಆರ್.ಡಿ. ಕಡ್ಲಿಕೊಪ್ಪ, ಚಿತ್ರ ಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಕಿರೇಸೂರ, ಸುರೇಶ ಡಿ. ಹಾಲಭಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.