ಮುಳಗುಂದ: ಗದಗ ಜಿಲ್ಲೆಯಲ್ಲಿ ಅತಿವೃಷ್ಟಿ ಪರಿಣಾಮ ಮುಂಗಾರು ಹಂಗಾಮಿನ ಹೆಸರು ಬೆಳೆ ಸಂಪೂರ್ಣ ಹಾನಿಯಾಗಿದೆ. ಬೆಳೆಹಾನಿ ಜಂಟಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ಪ್ರಕಾರ 131 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಕೊಡಬೇಕು ಎಂದು ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಪಟ್ಟಣದ ರೈತರು ಬೆಳೆಹಾನಿ ಪರಿಹಾರ ಶೀಘ್ರ ವಿತರಣೆಗೆ ಆಗ್ರಹಿಸಿ ಬುಧವಾರ ಸಲ್ಲಿಸಿದ ಮನವಿ ಸ್ವೀಕರಿಸಿ ನಂತರ ಮಾತನಾಡಿದರು. ಗೋವಿನ ಜೋಳ, ಶೇಂಗಾ, ಮೆಣಸಿನಗಿಡ ಇನ್ನಿತರ ಬೆಳೆಗಳ ಹಾನಿ ಸಮೀಕ್ಷೆಯು ರೈತರ ಇಚ್ಛಾ ನುಸಾರ ಆಗದಿದ್ದ ಪಕ್ಷದಲ್ಲಿ ಅಂತಹವುಗಳನ್ನ ಗುರುತಿಸಿ ರೈತರು ಆಕ್ಷೇಪಣೆ ಸಲ್ಲಿಸಲು ಆವಕಾಶವಿದೆ. ಅಂತಹವುಗಳನ್ನ ಮತ್ತೊಮ್ಮೆ ಸಮೀಕ್ಷೆ ನಡೆಸಿ ಯಾವ ರೈತನಿಗೂ ಅನ್ಯಾಯವಾಗದಂತೆ ಬೆಳೆ ಹಾನಿ ಸಮೀಕ್ಷೆ ವರದಿ ಮಾಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.
ಆದಷ್ಟು ಬೇಗ ಹೆಸರು ಬೆಳೆಹಾನಿ ಪರಿಹಾರ ನೀಡಲಾಗುವುದು. ಉಳ್ಳಾಗಡ್ಡಿ, ಮೆಣಸಿನಕಾಯಿ, ಗೋವಿನಜೋಳ, ಶೇಂಗಾ ಇತರೆ ಬೆಳೆಗಳ ಹಾನಿ ಬಗ್ಗೆ ವಸ್ತುಸ್ಥಿತಿ ನೋಡಿ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಗದಗ ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಕೃಷಿ ಸಾಹಯಕ ನಿರ್ದೇಶಕ ಮಲ್ಲಯ್ಯ ಕೊರಣ್ಣವರ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಸುಂಕಾಪೂರ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಯಲ್ಲವ್ವ ಕವಲೂರ, ಸ್ಥಾಯಿ ಸಮಿತಿ ಅಧ್ಯಕ್ಷ ಇಮಾಮಸಾಬ ಶೇಖ, ಸದಸ್ಯರಾದ ಕೆ.ಎಲ್.ಕರೇಗೌಡ್ರ, ದಾವುದ ಜಮಾಲ, ಮುಖಂಡರಾದ ರಾಮಣ್ಣ ಕಮಾಜಿ, ಬಸವರಾಜ ಕರಿಗಾರ, ಮಹ್ಮದಲಿ ಶೇಖ, ದೇವರಾಜ ಸಂಗನಪೇಟಿ ಹಾಗೂ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.