ADVERTISEMENT

ಗದಗ | ಗೊಂದಲದ ಗೂಡಾದ ದಸರಾ ಕ್ರೀಡಾಕೂಟ: ಕ್ರೀಡಾಪಟುಗಳಿಂದ ಆಯೋಜಕರಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 4:40 IST
Last Updated 6 ಸೆಪ್ಟೆಂಬರ್ 2025, 4:40 IST
ಅವಕಾಶ ವಂಚಿತ ಕ್ರೀಡಾಪಟುಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ ಜತೆಗೆ ಮಾತಿನ ಚಕಮಕಿ ನಡೆಸಿದರು
ಅವಕಾಶ ವಂಚಿತ ಕ್ರೀಡಾಪಟುಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ ಜತೆಗೆ ಮಾತಿನ ಚಕಮಕಿ ನಡೆಸಿದರು   

ಗದಗ: ಗದಗ ತಾಲ್ಲೂಕು ಮಟ್ಟದ ಪಂದ್ಯಾವಳಿ ನಡೆಸದೇ ಜಿಲ್ಲಾ ಮಟ್ಟದ ಸ್ಪರ್ಧೆಗೆ ಸಮಯ, ದಿನಾಂಕ ನಿಗದಿಪಡಿಸಿದ ಕಾರಣಕ್ಕೆ ಅವಕಾಶ ವಂಚಿತ ಕ್ರೀಡಾಪಟುಗಳಿಂದ ಆಕ್ರೋಶ ವ್ಯಕ್ತವಾದ ಕಾರಣ ಗದಗ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಗೊಂದಲದ ಗೂಡಾಗಿ ಮಾರ್ಪಟ್ಟಿತು.

ಆಗಸ್ಟ್‌ 28 ಹಾಗೂ 29ರಂದು ಗದಗ ಹೊರತುಪಡಿಸಿ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ನಡೆದಿತ್ತು. ಬಳಿಕ ಸೆ.3 ಮತ್ತು 4ರಂದು ಗದಗ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಮುಹೂರ್ತ ನಿಗದಿಪಡಿಸಲಾಗಿತ್ತು.

ಅದರಂತೆ, ಗದಗ ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಕೂಟ ನಡೆದು, ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಜಿಲ್ಲಾಮಟ್ಟಕ್ಕೆ ಅರ್ಹತೆ ಪಡೆದು, ನೋಂದಣಿ ಮಾಡಿಕೊಂಡಿದ್ದರು.

ಆದರೆ, ಗದಗ ತಾಲ್ಲೂಕು ಮಟ್ಟದ ಫುಟ್‍ಬಾಲ್, ಕೊಕ್ಕೊ ಸೇರಿ ಹಲವು ಸ್ಪರ್ಧೆಗಳೇ ನಡೆಯಲಿಲ್ಲ. ಮೊದಲೇ ನಿಗದಿಯಾದಂತೆ ಸೆ.4ರಂದು ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳ ಫುಟ್‍ಬಾಲ್ ತಂಡಗಳು ಬೆಳಿಗ್ಗೆಯೇ ಕ್ರೀಡಾಂಗಣದಲ್ಲಿ ಹಾಜರಾಗಿದ್ದವು.

ಗದಗ ತಾಲ್ಲೂಕಿನ ಕ್ರೀಡಾಕೂಟ ಬೆಳಿಗ್ಗೆ ನಡೆಸಿ, ಮಧ್ಯಾಹ್ನ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಸುವುದಾಗಿ ಆಯೋಜಕರು ತಿಳಿಸಿದ್ದರು. ಆದರೆ, ಗುರುವಾರ ಸಂಜೆ 6 ಗಂಟೆಯದಾರೂ ಗದಗ ತಾಲ್ಲೂಕು ಮಟ್ಟದ ಪಂದ್ಯಾಟ ನಡೆಯದ ಕಾರಣ ದೂರದ ಊರುಗಳಿಂದ ಬಂದಿದ್ದ ಕ್ರೀಡಾಪಟುಗಳ ಸಹನೆಯ ಕಟ್ಟೆಯೊಡೆಯಿತು. ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿರುದ್ಧ ಹರಿಹಾಯ್ದರು.

‘ರಾತ್ರಿಯಾದರೂ ಸರಿ; ಆಟ ಆಡಿಯೇ ಹೋಗುತ್ತೇವೆ’ ಎಂದು ನರಗುಂದದ ಫೈರೋಜ್ ನದಾಫ್‌ ಹಾಗೂ ಗಜೇಂದ್ರಗಡದ ಪುನೀತ ಬಿಸನಳ್ಳಿ ಪಟ್ಟು ಹಾಕಿದರು.

‘ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಉದ್ದೇಶದಿಂದಲೇ ಮೂರು ತಿಂಗಳಿಂದ ತರಬೇತಿ ನಡೆಸಿದ್ದೇವೆ. ಆದರೆ, ಇಲ್ಲಿನ ಅವ್ಯವಸ್ಥೆ ನೋಡಿ ದಸರಾ ಕ್ರೀಡಾಕೂಟದಲ್ಲೇ ಭಾಗವಹಿಸಬಾರದು ಎಂಬಂತಾಗಿದೆ’ ಎಂದು ನರಗುಂದದ ಸಿದ್ಧರಾಜ ಕಾಮಣ್ಣವರ ಆಕ್ರೋಶ ಹೊರಹಾಕಿದರು.

‘ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕೊಕ್ಕೊ ಹಾಗೂ ಫುಟ್‍ಬಾಲ್ ಕ್ರೀಡಾಪಟುಗಳಿಗೆ ಅನನುಕೂಲ ಆಗಿದ್ದು ನಿಜ. ಎರಡು ತಂಡಗಳ ಬದಲಾಗಿ ಆರು ತಂಡಗಳು ಬಂದಿದ್ದರಿಂದ ಗದಗ ತಾಲ್ಲೂಕು ಮಟ್ಟದ ಸ್ಪರ್ಧೆ ನಡೆಸಲು ಸಾಧ್ಯವಾಗಲಿಲ್ಲ. ಶೀಘ್ರದಲ್ಲೇ ಇನ್ನೊಂದು ದಿನಾಂಕ ನಿಗದಿಪಡಿಸಿ ಪಂದ್ಯ ನಡೆಸಲಾಗುವುದು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.