ADVERTISEMENT

ಆದ್ಯತೆ ಮೇರೆಗೆ ಕೋವಿಡ್‌ ಪರೀಕ್ಷೆ: ಜಿಲ್ಲಾಧಿಕಾರಿ

ತಾಲ್ಲೂಕು ಮಟ್ಟದ ಅಧಿಕಾರಿಗಳ ಜತೆಗೆ ಜಿಲ್ಲಾಧಿಕಾರಿ ವಿಡಿಯೊ ಕಾನ್ಫರೆನ್ಸ್‌

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 16:30 IST
Last Updated 20 ನವೆಂಬರ್ 2020, 16:30 IST
ಎಂ. ಸುಂದರೇಶ್ ಬಾಬು
ಎಂ. ಸುಂದರೇಶ್ ಬಾಬು   

ಗದಗ: ‘ಪದವಿ ಕಾಲೇಜು ವಿದ್ಯಾರ್ಥಿಗಳ ಕೋವಿಡ್‌–19 ಪರೀಕ್ಷೆಯನ್ನು ಆದ್ಯತೆ ಮೇರೆಗೆ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಗದಗ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಟಿಎಚ್‌ಒಗಳು ತಾಲ್ಲೂಕಿನಲ್ಲಿರುವ ಪದವಿ ಕಾಲೇಜುಗಳ ಪ್ರಾಂಶುಪಾಲರ ಜತೆಗೆ ಸಮನ್ವಯ ಸಾಧಿಸಿ, ಸಮಯ ನಿಗದಿಪಡಿಸಿಕೊಂಡು ವಿದ್ಯಾರ್ಥಿಗಳ ಸೋಂಕು ಪರೀಕ್ಷೆ ಮಾಡಿ, ವರದಿ ನೀಡ ಬೇಕು. ತಪಾಸಣೆ ವೇಳೆ ಸೋಂಕು ದೃಢ ಪಟ್ಟಲ್ಲಿ, ನಿಯಮಾನುಸಾರ ಸೂಕ್ತ ಚಿಕಿತ್ಸೆ ಒದಗಿಸಬೇಕು. ಕೋವಿಡ್‌–19 ತಪಾಸಣೆ, ಚಿಕಿತ್ಸೆಯನ್ನು ಸರ್ಕಾರವು ಸಂಪೂರ್ಣ ಉಚಿತವಾಗಿ ನೀಡಲಿದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಕೊಡಬೇಕು’ ಎಂದು ತಿಳಿಸಿದರು.

ADVERTISEMENT

‘ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದಂತೆ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಕಾರ್ಡ್‌ಗಳ ವಿತರ ಣೆಯ ಕಾರ್ಯ ಚುರುಕುಗೊಳಿಸಬೇಕು. ಅರ್ಹರೆಲ್ಲರಿಗೂ ಆರೋಗ್ಯ ಕರ್ನಾಟಕ ಕಾರ್ಡ್‌ ತಲುಪುವಂತೆ ಕ್ರಮ ವಹಿಸಬೇಕು. ಈ ಮೂಲಕ ಜಿಲ್ಲೆಯ ಬಡವರಿಗೆ ಉಚಿತ ಆರೋಗ್ಯ ಸೇವೆ ದೊರೆಯುವಂತೆ ಕ್ರಮ ವಹಿಸಬೇಕು’ ಎಂದು ಹೇಳಿದರು.

‘ಕಳೆದ ಸಾಲಿನಲ್ಲಿ ಮಳೆ, ಪ್ರವಾಹ ದಿಂದಾದ ಹಾನಿಗೆ ಪರಿಹಾರ ನೀಡಿ, ಪರಿ ಹಾರ ಕಾರ್ಯ ಮುಕ್ತಾಯಗೊಳಿಸಬೇಕು. ಮನೆ ಹಾನಿಯಾದವರು ಈವರೆಗೆ ಮನೆ ನಿರ್ಮಾಣ ಕಾಮಗಾರಿ ಕೈಗೊಳ್ಳ ದಿದ್ದಲ್ಲಿ, ಅವರಿಗೆ ಮನೆ ನಿರ್ಮಾಣ ಮಾಡಿ ಕೊಳ್ಳುವಂತೆ ಸೂಚಿಸಬೇಕು’ ಎಂದರು.

‘ಕೃಷಿ, ತೋಟಗಾರಿಕೆ ಇಲಾಖೆ ಅಧಿ ಕಾರಿಗಳು ರೈತರಿಗೆ ಹವಾಮಾನ ಆಧಾರಿತ ಬೆಳೆಗಳನ್ನು ಬೆಳೆಯುವ ಹಾಗೂ ಸೂಕ್ತ ರೀತಿಯ ಮುಂಜಾಗ್ರತಾ ಕ್ರಮ ವಹಿಸುವ ಬಗ್ಗೆ ಆಗಾಗ್ಗೆ ಮಾಹಿತಿ ನೀಡಬೇಕು. ಪುರಸಭೆ, ಪಟ್ಟಣ ಪಂಚಾಯ್ತಿ, ನಗರಸಭೆಯಿಂದ ಈಗಾಗಲೇ ವಿವಿಧ ಯೋಜನೆಗಳ ಅಡಿಯಲ್ಲಿ ಜಮೀನು ಖರೀದಿಸಿ ಅರ್ಹ ಫಲಾನುಭವಿಗಳ ಆಯ್ಕೆ, ಸೂಕ್ತ ನಿವೇಶನ ಹಂಚಿಕೆ, ನಿವೇಶನ ಪಟ್ಟಾ ವಿತರಣೆ ಕಾರ್ಯವನ್ನು ಶೀಘ್ರವೇ ಮಾಡುವ ಮೂಲಕ ಬಡವರಿಗೆ ಸರ್ಕಾರದ ಸವಲತ್ತುಗಳು ದೊರಕಿಸಿ ಕೊಡಬೇಕು’ ಎಂದು ಸೂಚಿಸಿದರು.

ಡಿಎಚ್‍ಒ ಡಾ.ಸತೀಶ್ ಬಸರೀಗಿಡದ, ನಗರಸಭೆ ಪೌರಾಯುಕ್ತ ರಮೇಶ್ ಜಾಧವ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.