ADVERTISEMENT

ಗಣಿಗಾರಿಕೆ ಹೆಸರಲ್ಲಿ ಅರಣ್ಯ ನಾಶ ಸಹಿಸಲ್ಲ: ಅರವಿಂದ ಲಿಂಬಾವಳಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 3:39 IST
Last Updated 15 ಮಾರ್ಚ್ 2021, 3:39 IST
ಅರಣ್ಯ ಸಚಿವ ಅರವಿಂದ ಲಿಂಬಾವಳಿ ಭಾನುವಾರ ಲಕ್ಷ್ಮೇಶ್ವರ ಸಮೀಪದ ಶೆಟ್ಟಕೇರಿ ಕೆರೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಕೆರೆ ಅಭಿವೃದ್ಧಿ ಕುರಿತು ಮಾಹಿತಿ ಪಡೆದರು
ಅರಣ್ಯ ಸಚಿವ ಅರವಿಂದ ಲಿಂಬಾವಳಿ ಭಾನುವಾರ ಲಕ್ಷ್ಮೇಶ್ವರ ಸಮೀಪದ ಶೆಟ್ಟಕೇರಿ ಕೆರೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಕೆರೆ ಅಭಿವೃದ್ಧಿ ಕುರಿತು ಮಾಹಿತಿ ಪಡೆದರು   

ಲಕ್ಷ್ಮೇಶ್ವರ: ‘ಗಣಿಗಾರಿಕೆ ಹೆಸರಲ್ಲಿ ಬೇಕಾಬಿಟ್ಟಿಯಾಗಿ ಅರಣ್ಯ ನಾಶ ಮಾಡುವುದನ್ನು ಸಹಿಸುವುದಿಲ್ಲ. ಅರಣ್ಯವನ್ನು ಹಾಳು ಮಾಡುವವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ’ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಎಚ್ಚರಿಕೆ ನೀಡಿದರು.

ಸಮೀಪದ ಶೆಟ್ಟಿಕೇರಿ ಕೆರೆ ಮತ್ತು ಶೆಟ್ಟಕೇರಿ ಫಾರ್ಮ್‍ಗೆ ಭಾನುವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಉತ್ತರ ಕರ್ನಾಟಕದ ಸಂಜೀವಿನಿ ಬೆಟ್ಟ ಎಂದೇ ಹೆಸರಾಗಿರುವ ಕಪ್ಪತ್ತಗುಡ್ಡದ ರಕ್ಷಣೆ ಸರ್ಕಾರದ ಹೊಣೆಯಾಗಿದೆ. ಗುಡ್ಡದ ತಪ್ಪಲಿನಲ್ಲಿ ಮೇಲಿಂದ ಮೇಲೆ ಬೆಂಕಿ ಬೀಳುತ್ತಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಅರಣ್ಯಕ್ಕೆ ಬೆಂಕಿ ಹಚ್ಚುವವರ ವಿರುದ್ಧ ಅರಣ್ಯ ಇಲಾಖೆ 13 ಪ್ರಕರಣಗಳನ್ನು ದಾಖಲಿಸಿದೆ’ ಎಂದರು.

‘ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಹಾಗೂ ಉಳುಮೆ ಮಾಡುತ್ತಿರುವವರು ಸೂಕ್ತ ದಾಖಲೆಗಳನ್ನು ಇಲಾಖೆಗೆ ತೋರಿಸಬೇಕು. ಲಕ್ಷ್ಮೇಶ್ವರ ತಾಲ್ಲೂಕಿನ ಶೆಟ್ಟಕೇರಿ ಕೆರೆ ಬಹಳಷ್ಟು ವಿಶಾಲವಾಗಿದ್ದು ಇಲಾಖೆ ವತಿಯಿಂದ ಕೆರೆ ಅಭಿವೃದ್ಧಿ ಪಡಿಸಲಾಗುವುದು. ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ಕೆರೆಯ ಹೂಳನ್ನು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ತೆಗೆಸಲು ಕ್ರಮಕೈಗೊಳ್ಳಲಾಗುವುದು. ಕೆರೆ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಕಾನೂನು ಕ್ರಮಕೈಗೊಂಡು, ಅಲ್ಲಿ ಅರಣ್ಯ ಬೆಳೆಸಲು ಯೋಜನೆ ರೂಪಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಶಾಸಕ ರಾಮಣ್ಣ ಲಮಾಣಿ, ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ, ಜಿಲ್ಲಾ ಅರಣ್ಯಾಧಿಕಾರಿ ಸೂರ್ಯಸೇನ್, ಜಿಲ್ಲಾ ಸಾಮಾಜಿಕ ವಿಭಾಗದ ಅರಣ್ಯ ಉಪಸಂರಕ್ಷಣಾಧಿಕಾರಿ ಆರ್.ಎಸ್. ನಾಗಶೆಟ್ಟಿ, ರೇಂಜರ್ ಎ.ಎಚ್. ಮುಲ್ಲಾ, ಎಸಿಎಫ್ ವಿ.ಎಚ್. ಪರಿಮಳ, ಆರ್‍ಎಫ್‍ಒ ಪ್ರದೀಪ ಪವಾರ, ತಿಪ್ಪಣ್ಣ ಕೊಂಚಿಗೇರಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.