
ನರೇಗಲ್: ‘ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಿ ಸಮಾಜ ಘಾತಕ ವ್ಯಕ್ತಿಗಳ ಮನದಲ್ಲಿ ಭಯ ಹುಟ್ಟಿಸುವಂತಹ ಕಾನೂನು ತ್ವರಿತವಾಗಿ ಜಾರಿ ಮಾಡಲು ಎಲ್ಲಾ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಮುಂದಾಗಬೇಕು’ ಎಂದು ಪಟ್ಟಣದ ವೈದ್ಯ ಡಾ.ಜಿ.ಕೆ.ಕಾಳೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ‘ಅತ್ಯಾಚಾರ ಮಾಡಿದವರು ರಾಜಕಾರಣಿಗಳು, ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಅಥವಾ ಪ್ರಭಾವಿ ವ್ಯಕ್ತಿಗಳಾಗಿದ್ದಾಗ ಅವರ ವಿರುದ್ದ ತ್ವರಿತವಾಗಿ ಕ್ರಮಕೈಗೊಳ್ಳಲು ನಮ್ಮಲ್ಲಿ ಕಾನೂನು ಬಿಗಿಯಾಗಿಲ್ಲ. ಇದರಿಂದ ಅತ್ಯಾಚಾರಿಗಳಿಗೆ ಭಯವೇ ಇಲ್ಲದಂತಾಗಿದೆ. ಅಂತಹ ಘಟನೆಗಳು ನಡೆದ ನಂತರವೂ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ದೇಶ- ವಿದೇಶಗಳಿಗೆ ಹೋಗುತ್ತಿದ್ದಾರೆ. ಆದ್ದರಿಂದ ದೇಶದಲ್ಲಿ ಕಠಿಣ ಕಾನೂನು ಅವಶ್ಯಕತೆ ತುಂಬಾ ಅಗತ್ಯವಿದೆ’ ಎಂದು ಹೇಳಿದ್ದಾರೆ.
‘ಇಂತಹ ಕಾನೂನು ರಚನೆಗೆ ಜನಪ್ರತಿನಿಧಿಗಳು ಹಿಂದೇಟು ಹಾಕಿದರೆ ಅತ್ಯಾಚಾರಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ನಡೆಯುವ ಅತ್ಯಾಚಾರದ ಘಟನೆಗಳಿಗೆ ಜನಪ್ರತಿನಿಧಿಗಳೇ ನೇರ ಹೊಣೆ ಆಗಿರುತ್ತಾರೆ. ಇದನ್ನು ಅರಿತು ಕಾನೂನು ರಚೆನೆಗೆ ಮುಂದಾಗಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.