ADVERTISEMENT

ರಿಯಾಯಿತಿ ಬಿತ್ತನೆ ಬೀಜ ಪೂರೈಕೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 16:09 IST
Last Updated 26 ಸೆಪ್ಟೆಂಬರ್ 2024, 16:09 IST
ಮುಂಡರಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಅವರು ಮುಂಡರಗಿ ರೈತ ಸಂಪರ್ಕ ಕೇಂದ್ರದಲ್ಲಿ ತಾಲ್ಲೂಕಿನ ರೈತರಿಗೆ ರಿಯಾಯಿತಿ ದರದ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆಗೆ ಚಾಲನೆ ನೀಡಿದರು
ಮುಂಡರಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಅವರು ಮುಂಡರಗಿ ರೈತ ಸಂಪರ್ಕ ಕೇಂದ್ರದಲ್ಲಿ ತಾಲ್ಲೂಕಿನ ರೈತರಿಗೆ ರಿಯಾಯಿತಿ ದರದ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆಗೆ ಚಾಲನೆ ನೀಡಿದರು   

ಮುಂಡರಗಿ: ‘ರೈತರು ವೈವಿಧ್ಯಮಯ ಬೆಳೆಗಳನ್ನು ಬೆಳೆದು ಆದಾಯ ಹೆಚ್ಚಿಸಿಕೊಳ್ಳಬೇಕು ಎನ್ನುವ ಕಾರಣದಿಂದ ಸರ್ಕಾರ ತಾಲ್ಲೂಕಿನ ಎಲ್ಲ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಸುತ್ತಲಿದೆ. ರೈತರು ಅದರ ಸದುಪಯೋಗ ಪಡೆದುಕೊಂಡು ಹೆಚ್ಚು ಆದಾಯ ಪಡೆದುಕೊಳ್ಳಬೇಕು’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ತಿಳಿಸಿದರು.

ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ತಾಲ್ಲೂಕಿನ ರೈತರಿಗೆ ರಿಯಾಯಿತಿ ದರದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ರೈತರ ವಾಸ್ತವಿಕ ಹಿಡುವಳಿ ಅಥವಾ ಗರಿಷ್ಠ ಎರಡು ಹೆಕ್ಟೇರ್‌ ಪ್ರದೇಶಕ್ಕೆ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಎಲ್ಲಾ ಬಿತ್ತನೆ ಬೀಜಗಳಿಗೆ ರೈತರು ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು. ಪ್ರಮಾಣಿತ ಬೀಜವನ್ನು ಒಂದು ಬಾರಿ ಪಡೆದ ರೈತನಿಗೆ ಮುಂದಿನ ಮೂರು ವರ್ಷ ಅದೇ ಬೆಳೆಯ ಬಿತ್ತನೆ ಬೀಜವನ್ನು ನೀಡಲು ನಿಯಮಾವಳಿಯಲ್ಲಿ ಅವಕಾಶ ಇರುವುದಿಲ್ಲ’ ಎಂದು ತಿಳಿಸಿದರು.

ADVERTISEMENT

ಬೀಜವನ್ನು ಪಡೆಯುವಾಗ ರೈತರು ಇಲಾಖೆ ನೀಡಿರುವ ಎಫ್.ಐ.ಡಿ. ಸಂಖ್ಯೆ ಅಥವಾ ಆಧಾರ ಕಾರ್ಡ್‌, ಬ್ಯಾಂಕ್‌ ಪಾಸ್‍ಬುಕ್ ಹಾಗೂ ಜಮೀನಿನ ಉತಾರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಎಸ್.ಸಿ– ಎಸ್.ಟಿ ರೈತರು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಬಿತ್ತನೆ ಪೂರ್ವದಲ್ಲಿ ಕೃಷಿ ತಜ್ಷರು ಹಾಗೂ ಕೃಷಿ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ರೈತ ಸಂಪರ್ಕ ಕೇಂದ್ರದ ಅಧಿಕಾರಿ ವಿರೇಶ ಎಸ್., ನಿಂಗಪ್ಪ ಬಿ., ಆತ್ಮಯೋಜನೆಯ ಗೌರಿಶಂಕರ ಸಜ್ಜನರ, ರೈತರಾದ ಚಂದ್ರಪ್ಪ ಕುರಿ, ಸಣ್ಣಬಸಪ್ಪ ಜಳಕಿ, ಚಂದ್ರಶೇಕರಪ್ಪ ಗೊಬ್ಬರಗುಂಪಿ, ಮಂಜುನಾಥ ಗೌಡರ, ಬೀಮಣ್ಣ ಸುಗ್ನಳ್ಳಿ, ಬಾಬುಜಿ ಹಡಪದ ಉಪಸ್ಥಿತರಿದ್ದರು.

ಬೀಜ ದಾಸ್ತಾನು; ಸಹಾಯಧನ ಸೌಲಭ್ಯ ‘

ರೈತ ಸಂಪರ್ಕ ಕೆಂದ್ರದಲ್ಲಿ 300 ಕ್ವಿಂಟಲ್ ಕಡಲೆ 30 ಕ್ವಿಂಟಲ್ ಜೋಳ ಹಾಗೂ 20 ಕ್ವಿಂಟಲ್ ಗೋಧಿ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದೆ. ಎಸ್.ಸಿ. ಎಸ್.ಟಿ. ಪಂಗಡದ ರೈತರಿಗೆ ತಲಾ 20ಕೆಜಿ ಕಡಲೆ ಬೀಜಕ್ಕೆ ₹750 ಸಹಾಯ ಧನ ಸಾಮಾನ್ಯ ವರ್ಗದ ರೈತರಿಗೆ ₹500 ಸಹಾಯ ಧನ ನೀಡಲಾಗುವುದು. ಅದೇ ರೀತಿ ಎಸ್.ಸಿ. ಎಸ್.ಟಿ. ಪಂಗಡದ ರೈತರಿಗೆ ತಲಾ 3ಕೆಜಿ ಜೋಳದ ಬೀಜಕ್ಕೆ ₹90 ಸಾಮಾನ್ಯ ವರ್ಗದ ರೈತರಿಗೆ ₹60 ಸಹಾಯ ಧನ ನೀಡಲಾಗುವುದು. ಎಸ್.ಸಿ. ಎಸ್.ಟಿ. ಪಂಗಡದ ರೈತರಿಗೆ ತಲಾ 30ಕೆಜಿ ಗೋಧಿ ಬೀಜಕ್ಕೆ ₹675 ಹಾಗೂ ಸಾಮಾನ್ಯ ವರ್ಗದ ರೈತರಿಗೆ ₹450  ಸಹಾಯ ಧನ ನೀಡಲಾಗುವುದು’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.