ಡಂಬಳ: ನಿರಂತರವಾಗಿ ಮಳೆ ಸುರಿದ ಪರಿಣಾಮ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಸುವ ರಸ್ತೆಯಲ್ಲಿ ವಾಹನ ಹೊಲದತ್ತ ಬರಲು ಸಾಧ್ಯವಾಗದೆ ಮತ್ತು ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ರೈತರೊಬ್ಬರು ಹೊಲದಲ್ಲಿಯೇ ಮೃತಪಟ್ಟಿರುವ ಹೃದಯ ವಿದ್ರಾಹಕ ಘಟನೆ ಡಂಬಳ ಹೋಬಳಿ ಹಳ್ಳಿಕೇರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಹಳ್ಳಿಕೇರಿ ಗ್ರಾಮದ ಕರಿಯಪ್ಪ ಗೌಡರ(68) ಮೃತ ರೈತ. ನಿರಂತರ ಮಳೆ ಹಿನ್ನೆಲೆಯಲ್ಲಿ ಹಳ್ಳಿಕೇರಿ ಗ್ರಾಮದ ರಸ್ತೆಗಳು ಹದಗೆಟ್ಟಿವೆ. ಅಲ್ಲದೆ ಎಂದಿನಂತೆ ಶುಕ್ರವಾರ ಬೆಳಿಗ್ಗೆ ಹಳ್ಳದಾಟಿ ಹೊಲಕ್ಕೆ ಕೆಲಸಕ್ಕೆಂದು ಕರಿಯಪ್ಪ ಗೌಡರ ತೆರಳಿದ್ದರು. ಆಗ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಕುಸಿದು ಕುಳಿತಿರುವುದನ್ನು ಕಂಡ ಸುತ್ತಮುತ್ತಲೀನ ರೈತರು ಸಹಾಯಕ್ಕೆ ಧಾವಿಸಿದ್ದಾರೆ. ತೀವೃವಾಗಿ ಅಸ್ವಸ್ಥಗೊಂಡ ಅವರನ್ನು ಹೊಲದಿಂದ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ ಅಲ್ಲಿಗೆ ಯಾವುದೇ ವಾಹನವೂ ಸ್ಥಳಕ್ಕೆ ಬರಲು ಒಪ್ಪಲಿಲ್ಲ. ಬಳಿಕ ಅವರನ್ನು ಹಳ್ಳದಾಟಿಸಲು ಪ್ರಯತ್ನ ಮಾಡಲಾಗಿದೆ.ಅಷ್ಟರಲ್ಲಿ ಕರಿಯಪ್ಪ ಹೊಲದಲ್ಲಿಯೇ ಮೃತಪಟ್ಟಿದ್ದಾರೆ.
ಶವ ಸಾಗಿಸಲು ಸಹ ರಸ್ತೆ ಸಮರ್ಪಕವಾಗಿ ಇಲ್ಲದ ಕಾರಣ ಅನಿವಾರ್ಯವಾಗಿ ನಾಲ್ಕು ಮಂದಿ ಸೇರಿ ಮೃತದೇಹವನ್ನು ಹಳ್ಳದಲ್ಲಿ ಹೊತ್ತುಕೊಂಡು ಹೋಗಿ ಮನೆಗೆ ಸಾಗಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.