ಗದಗ: ‘1980ರ ಜುಲೈನಲ್ಲಿ ನಡೆದಿದ್ದ ರೈತರ ಬಂಡಾಯ, ರೈತ ಸಂಘದ ಉಗಮ ಕಾರಣವಾದ ನೆನಪಿನಲ್ಲಿ ರೈತರ ಸ್ಮಾರಕ ನಿರ್ಮಿಸಲು ರೈತ ಸಂಘಟನೆಗಳ 45 ವರ್ಷಗಳ ಬೇಡಿಕೆಗೆ ಇಂದು ಚಾಲನೆ ನೀಡಲಾಗಿದೆ’ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ನರಗುಂದದಲ್ಲಿ ಸೋಮವಾರ ನಡೆದ ಹುತಾತ್ಮ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ದಿ. ವೀರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿಗೆ ನಮನ ಸಲ್ಲಿಸಿ, ಅವರು ಮಾತನಾಡಿದರು.
‘ರೈತ ಸ್ಮಾರಕ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ದೇಸಾಯಿಗೌಡ ಪಾಟೀಲ, ಸಲೀಂ ಮೇಗಲಮನಿ ಅಭಿನಂದನಾರ್ಹರು. 2026 ಜುಲೈ 21ರೊಳಗೆ ಸ್ಮಾರಕ ಪೂರ್ಣವಾಗಲಿದೆ. ಇದಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
‘ಕಳಸಾ ಬಂಡೂರಿ ಯೋಜನೆಗೆ ಕೇಂದ್ರದ ವನ್ಯಜೀವಿ ಇಲಾಖೆ ಅನುಮತಿ ಬೇಕು. ಸಿಕ್ಕ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಕೃಷ್ಣ ನದಿ ಬಿ ಸ್ಕೀಂ ಯೋಜನೆಗೆ ಕೇಂದ್ರ ಗಮನ ಹರಿಸುತ್ತಿಲ್ಲ’ ಎಂದು ಆರೋಪಿಸಿದರು.
ಈ ಬಾರಿ ಆಗಲಿಲ್ಲ ಬಹಿರಂಗ ಸಮಾವೇಶ ವೀರಗಲ್ಲು ಇರುವ ಸ್ಥಳದಲ್ಲೇ ಶಂಕರ ಅಂಬಲಿ ನೇತೃತ್ವದಲ್ಲಿ ಒಂದು ವೇದಿಕೆ ಅದರ ಹಿಂದುಗಡೆ ವಿರೇಶ ಸೊಬರದಮಠ ನೇತೃತ್ವದ ಮಹದಾಯಿ ಹೋರಾಟದ ವೇದಿಕೆ ಇದ್ದ ಕಾರಣ ಹುತಾತ್ಮ ರೈತ ದಿನಾಚರಣೆಗೆ ಬಂದ ರೈತರಿಗೆ ಗೊಂದಲವಾಯಿತು. ಎರಡು ವೇದಿಕೆಯಲ್ಲೂ ರೈತ ಮುಖಂಡರ ಭಾಷಣ ಮಾಡಿದರು. ಇದರಿಂದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ರೈತರು ವಿವಿಧ ಸಂಘಟನೆಗಳಿಗೆ ರೈತ ಹೋರಾಟ ವೇದಿಕೆ ಆರೋಪ ಪ್ರತ್ಯಾರೋಪಗಳು ಗೊಂದಲ ಬೇಸರ ತರಿಸಿದವು. ಪ್ರತಿ ಸಲದಂತೆ ಬಹಿರಂಗ ಸಮಾವೇಶ ಪಕ್ಷದ ಸಮಾವೇಶ ಈ ಬಾರಿ ನಡೆಯಲಿಲ್ಲ. ಪ್ರತ್ಯೇಕ ವೇದಿಕೆಯಲ್ಲಿ ಆಳಂದ ಶಾಸಕ ಬಿ.ಆರ್.ಪಾಟೀಲ ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.