ಮುಂಡರಗಿ: ಯುರಿಯಾ ಗೊಬ್ಬರ ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಭಾನುವಾರ ಪಟ್ಟಣದ ಕೊಂಬಳಿ ಕೃಷಿ ಪರಿಕರಗಳ ಮಾರಾಟ ಮಳಿಗೆಗೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಗೊಬ್ಬರ ಬಂದಿರುವುದನ್ನು ತಿಳಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ರೈತರಿಗೆ ಮುಂಗಾರು ಹಂಗಾಮಿನಲ್ಲಿ 270ಟನ್ ಯುರಿಯಾ ಗೊಬ್ಬರ ಬರಬೇಕಿತ್ತು. ಆದರೆ, ಕೇವಲ 70ಟನ್ ಗೊಬ್ಬರ ಮಾತ್ರ ಪೂರೈಕೆಯಾಗಿದೆ. ತಾಲ್ಲೂಕಿನಾದ್ಯಂತ ಉತ್ತಮ ಮಳೆ ಸುರಿಯುತ್ತಿದ್ದು, ಸರ್ಕಾರ ರೈತರ ಅಗತ್ಯಕ್ಕೆ ತಕ್ಕಷ್ಟು ಗೊಬ್ಬರ ಪೂರೈಸಬೇಕು ಎಂದು ರೈತರು ಆಗ್ರಹಿಸಿದರು.
‘ಬೆಳೆಗಳಿಗೆ ಯುರಿಯಾ ಗೊಬ್ಬರ ಅವಶ್ಯಕವಾಗಿದೆ. ಸರ್ಕಾರ ರೈತರ ಅಗತ್ಯಕ್ಕೆ ತಕ್ಕಷ್ಟು ಯುರಿಯಾ ಗೊಬ್ಬರ ಪೂರೈಸಬೇಕು. ಇಲ್ಲದಿದ್ದರೆ ಬೆಳೆಗಳು ಹಾಳಾಗುತ್ತವೆ’ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಶಿವಾನಂದ ಇಟಗಿ ಒತ್ತಾಯಿಸಿದರು.
‘ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದು, 170ಟನ್ ಯುರಿಯಾ ಬಂದಿದ್ದು, ಸೋಮವಾರ 100ಟನ್ ಗೊಬ್ಬರ ಬರಲಿದೆ. ಮೂರು ದಿನಗಳ ಬಳಿಕ ಪುನಃ 300ಟನ್ ಗೊಬ್ಬರ ಬರಲಿದೆ. ಎಲ್ಲ ರೈತರಿಗೂ ಸಾಕಷ್ಟು ಗೊಬ್ಬರ ದೊರೆಯಲಿದ್ದು, ರೈತರು ಆತಂಕಕ್ಕೆ ಒಳಗಾಗಬೇಕಿಲ್ಲ’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ತಿಳಿಸಿದರು.
ಸರ್ಕಾರ ಈಗ ನ್ಯಾನೋ ಯುರಿಯಾ ಗೊಬ್ಬರ ಪರಿಚಯಿಸಿದೆ. ಯುರಿಯಾ ರಸಗೊಬ್ಬರದ ಬದಲು ರೈತರು ನ್ಯಾನೊ ಯುರಿಯಾ ಬಳಸಬೇಕು. ಇದರಿಂದ ಖರ್ಚು ಕಡಿಮೆಯಾಗಿ ಅಧಿಕ ಇಳುವರಿ ಪಡೆದುಕೊಳ್ಳಬಹುದುಪ್ರಾಣೇಶ ಸಹಾಯಕ ಕೃಷಿ ನಿರ್ದೇಶಕ ಮುಂಡರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.