ADVERTISEMENT

ಹೊಸ ವರ್ಷಾಚರಣೆ ನೆಪದಲ್ಲಿ ಪುಂಡರ ಕುಕೃತ್ಯ: ಕ್ರಮಕ್ಕೆ ಆಗ್ರಹ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 3 ಜನವರಿ 2019, 20:15 IST
Last Updated 3 ಜನವರಿ 2019, 20:15 IST
ನರೇಗಲ್‌ನ ಬಸ್‌ನಿಲ್ದಾಣದ ಗೋಡೆ ಮೇಲೆ ಪುಂಡರ ಬರಹ
ನರೇಗಲ್‌ನ ಬಸ್‌ನಿಲ್ದಾಣದ ಗೋಡೆ ಮೇಲೆ ಪುಂಡರ ಬರಹ   

ನರೇಗಲ್: ಹೊಸ ವರ್ಷ ಆಚರಣೆ ನೆಪದಲ್ಲಿ ಪಟ್ಟಣದ ಕೆಲ ಪುಂಡರು ಸಾರ್ವಜನಿಕ ಸ್ಥಳ, ಕೊಠಡಿ, ಗೋಡೆ ಹಾಗೂ ರಸ್ತೆಗಳ ಮೇಲೆ ಅಶ್ಲೀಲ ಬರಹ ಮಾಡಿದ್ದು, ಜನರು ಮುಜುಗರಕ್ಕೆ ಈಡಾಗುವಂತಾಗಿದೆ.

ಪಟ್ಟಣದ ಬಸ್‌ನಿಲ್ದಾಣದ ಗೋಡೆ, ಕಾಂಪೌಂಡ್, ಕೊಠಡಿ, ಕೂರುವ ಆಸನಗಳ ಮೇಲೆ ಹಾಗೂ ಶಾಲೆ, ಕಾಲೇಜುಗಳಿಗೆ ತೆರಳುವ ಡಾಂಬರ್ ರಸ್ತೆ ಮೇಲೆ ಹುಡುಗಿಯರ ಹೆಸರುಗಳನ್ನು ಬಳಕೆ ಮಾಡಿಕೊಂಡು ಅಶ್ಲೀಲ ಶಬ್ದಗಳಗಳನ್ನು ಬರೆದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣ ಸ್ವಾತಂತ್ರ್ಯಪೂರ್ವದಿಂದ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಪಡೆದಿದೆ.ಕೋಟುಮಚಗಿ, ಅಬ್ಬಿಗೇರಿ, ಹಾಲಕೆರೆ, ಕೋಡಿಕೊಪ್ಪ, ತೋಟಗಂಟಿ, ಜಕ್ಕಲಿ, ಮಾರನಬಸರಿ, ನಿಡಗುಂದಿ, ಕಳಕಾಪುರ, ಗಜೇಂದ್ರಗಡ ಗ್ರಾಮಗಳಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸಕ್ಕೆಂದು ಬರುತ್ತಾರೆ. ಇದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಮೂಲಕ ರಸ್ತೆ ಮಾರ್ಗವಾಗಿ ತಮ್ಮ ಶಾಲೆ–ಕಾಲೇಜುಗಳಿಗೆ ಹೋಗುತ್ತಾರೆ. ಆದರೆ, ಪುಂಡರ ಬರಹಳಿಂದ ವಿದ್ಯಾರ್ಥಿನಿಯರು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳದಂತಾಗಿದೆ. ತಲೆ ಎತ್ತಿ ಗೋಡೆ ನೋಡುವಂತಿಲ್ಲ, ತಲೆ ತಗ್ಗಿಸಿದರೆ ರಸ್ತೆಯ ಮೇಲಿನ ಬರಹಳನ್ನು ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ರಸ್ತೆ ಮೇಲೆ, ಗೋಡೆಗಳ ಮೇಲೆ ಕೆಲ ಹುಡುಗಿಯರ ಹೆಸರುಗಳನ್ನು ಬರೆದಿರುವುದರಿಂದ ಆ ಹೆಸರಿನ ವಿದ್ಯಾರ್ಥಿನಿಯರು ಶಾಲೆ–ಕಾಲೇಜಿಗೆ ಹೋಗುವುದು ಕಷ್ಟವಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿಯರು ಪಾಲಕರಿಗೆ, ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.‘ಈ

ರೀತಿ ಅಶ್ಲೀಲ ಬರಹ ಬರೆಯುವವರು ತಮಗೂ ತಾಯಿ, ಅಕ್ಕ, ತಂಗಿ, ಸಂಬಂಧಿಕರ ಮಗಳು ಇದ್ದಾರೆ ಎಂಬುದನ್ನು ಅರಿಯಬೇಕು. ಈ ರೀತಿಯ ಕುಕೃತ್ಯದಿಂದ ಮಗಳನ್ನು ಕಾಲೇಜಿಗೆ ಕಳುಹಿಸಲು ಬೇಜಾರಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸದ ಪಾಲಕರೊಬ್ಬರು ‘ಪ್ರಜಾವಾಣಿ’ ಎದುರು ತಮ್ಮ ಅಳಲು ತೋಡಿಕೊಂಡರು.

‘ಹೊಸ ವರ್ಷದ ಮೊದಲ ದಿನ ಬೆಳಿಗ್ಗೆ ಎದ್ದು ಕಾಲೇಜು ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದಾಗ ಮನಸ್ಸಿಗೆ ತುಂಬಾ ನೋವಾಯಿತು. ರಸ್ತೆ ತುಂಬ ಬರೆದ ಪದಗಳನ್ನು ನೋಡಿ ಅಸಹ್ಯವೆನಿಸಿತು. ಈ ಕುರಿತು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕಿತ್ತು. ಈ ರೀತಿ ಪ್ರಕರಣಗಳು ಹೋಳಿ ಹಬ್ಬದಲ್ಲೂ ಕಂಡುಬರುತ್ತವೆ. ಇನ್ನು ಮುಂದಾದರೂ ಪೊಲೀಸರು ಈ ಕುರಿತು ಎಚ್ಚರ ವಹಿಸಬೇಕು. ಗ್ರಾಮದಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಗ್ರಾಮದ ನಿವಾಸಿ ಡಾ.ಆರ್.ಕೆ.ಗಚ್ಚಿನಮಠ ಹೇಳಿದರು.

*
ನಮ್ಮ ಬರಹ ಹಾಗೂ ಆಚರಣೆ ಇನ್ನೊಬ್ಬರಿಗೆ ಸಂತೋಷ ನೀಡಬೇಕು ವಿನಃ ನೋವನಲ್ಲ. ಇದನ್ನು ಪುಂಡ–ಪೋಕರಿಗಳು ಅರಿಯಬೇಕು.
-ರವೀಂದ್ರನಾಥ ದೊಡ್ಡಮೇಟಿ, ಚೇರಮನ್ನರು ಸಿಬಿಎಸ್‌ಇ ಸ್ಕೂಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.