ADVERTISEMENT

ಗದಗ | ಬಯಲಾಟ ಅಕಾಡೆಮಿ ಅಧ್ಯಕ್ಷರನ್ನೂ ನೇಮಿಸಿ: ಆಗ್ರಹ

ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ: ಬಯಲಾಟ ಕಲಾವಿದರ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 7:13 IST
Last Updated 22 ಅಕ್ಟೋಬರ್ 2025, 7:13 IST
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗೆ ಬಯಲಾಟ ಅಕಾಡೆಮಿ ಅಧ್ಯಕ್ಷರನ್ನು ನೇಮಿಸುವಂತೆ ಒತ್ತಾಯಿಸಿ ಕಲಾವಿದರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗೆ ಬಯಲಾಟ ಅಕಾಡೆಮಿ ಅಧ್ಯಕ್ಷರನ್ನು ನೇಮಿಸುವಂತೆ ಒತ್ತಾಯಿಸಿ ಕಲಾವಿದರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು   

ಗದಗ: 2025ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗೆ ಬಯಲಾಟ ಅಕಾಡೆಮಿ ಅಧ್ಯಕ್ಷರನ್ನೂ ನೇಮಕ ಮಾಡುವಂತೆ ಆಗ್ರಹಿಸಿ ಬಯಲಾಟ ಕಲಾವಿದರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸುತಾರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅಶೋಕ ಸುತಾರ ಮಾತನಾಡಿ, ‘ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಸರ್ಕಾರ ಸಲಹಾ ಸಮಿತಿ ರಚಿಸಿದ್ದು, ಅದರಲ್ಲಿ ಕರ್ನಾಟಕ ರಾಜ್ಯದ ವಿವಿಧ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸಾಹಿತಿಗಳು ಹಾಗೂ ಜಾನಪದ, ರಂಗಭೂಮಿ, ಮಾಧ್ಯಮ ವಿಭಾಗ, ವೈದ್ಯಕೀಯ, ಸಂಗೀತ ನೃತ್ಯ, ಚಿತ್ರಕಲೆ, ನ್ಯಾಯಾಂಗ, ಕಿರುತೆರೆ, ಚಲನಚಿತ್ರ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಪದನಿಮಿತ್ಯ ಸದಸ್ಯರನ್ನು ಒಳಗೊಂಡಂತೆ ಎಲ್ಲ ವಿಭಾಗದ ತಜ್ಞರನ್ನು ಸಲಹಾ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

‘ಆದರೆ, ಉತ್ತರ ಕರ್ನಾಟಕದ ಗಂಡು ಕಲೆಯಾಗಿರುವ ಬಯಲಾಟಕ್ಕೆ ಸಂಬಂಧಿಸಿದಂತೆ ಯಾವೊಬ್ಬ ತಜ್ಞರು ಅಥವಾ ಬಯಲಾಟ ಅಕಾಡೆಮಿಯ ಅಧ್ಯಕ್ಷರನ್ನು 2024-25 ಹಾಗೂ 2025-26ನೇ ಸಾಲಿನಲ್ಲಿ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಿಲ್ಲ. ಇದರಿಂದ ಉತ್ತರ ಕರ್ನಾಟಕದ ಗಂಡು ಕಲೆಯಾದ ಬಯಲಾಟ ಕಲೆಗೆ ಹಾಗೂ ಕಲಾವಿದರಿಗೆ ಅವಮಾನಿಸಿದಂತೆ ಆಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ತಕ್ಷಣವೇ ಈ ಲೋಪ ಸರಿಪಡಿಸಿ, ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್‌.ದುರ್ಗಾದಾಸ ಅವರನ್ನು ನೇಮಕ ಮಾಡಬೇಕು’ ಎಂದು ಒತ್ತಾಯಿಸಿದರು.

ಗದಗ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಅವರು ಮನವಿ ಸ್ವೀಕರಿಸಿದರು.

ರಾಮಚಂದ್ರ ಅರ್ಕಸಾಲಿ, ಮನೋಜ್‌ಕುಮಾರ ಸುತಾರ, ಮಲ್ಲೇಶಗೌಡ ತಿಮ್ಮನಗೌಡ್ರ, ಶಂಕರಪ್ಪ ವಿ. ಬಡಿಗೇರ, ಸುಭಾಸ ಮಳಗಿ, ಸಿದ್ಧಲಿಂಗೇಶ್ವರ ಮುಳ್ಳಾಳ, ನಿಖಿತಾ ಸುತಾರ, ಸುಭಾಷ ಕದಡಿ, ರಂಗಪ್ಪ ಮಡ್ಡಿಕಾರ, ಬಾಳಪ್ಪ ಮನಗೂಳಿ, ಪ್ರಕಾಶ ಬೆಣಕಲ್ಲ, ಖಾಜೇಸಾಬ ನಾರಾಯಣಕೇರಿ, ವಿರುಪಾಕ್ಷಪ್ಪ ಕ್ಷೇತ್ರಿ, ಉಮೇಶ ನಾಯಕ ಸೇರಿದಂತೆ ಬಯಲಾಟದ ಪಾತ್ರಧಾರಿ ಭೀಮಾರ್ಜುನರ ವೇಷಭೂಷಣದೊಂದಿಗೆ ಪಾಲ್ಗೊಂಡು ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.