ADVERTISEMENT

ಗದಗ | ಸೊರಟೂರ ಗ್ರಾಮದಲ್ಲಿ ಹಾಳಾದ ಸಿಸಿ ರಸ್ತೆಗಳು 

ಕೊಳಚೆ ನೀರಿಗಿಲ್ಲ ಶಾಶ್ವತ ಪರಿಹಾರ: ಮನವಿಗೆ ಸ್ಪಂದಿಸದ ಸ್ಥಳೀಯ ಆಡಳಿತ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 4:37 IST
Last Updated 23 ಏಪ್ರಿಲ್ 2025, 4:37 IST
ಸೊರಟೂರ ಗ್ರಾಮದ ಟಿಪ್ಪು ಸರ್ಕಲ್ ಹತ್ತಿರ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿರುವುದು
ಸೊರಟೂರ ಗ್ರಾಮದ ಟಿಪ್ಪು ಸರ್ಕಲ್ ಹತ್ತಿರ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿರುವುದು   

ಸೊರಟೂರ (ಮುಳಗುಂದ): ಗ್ರಾಮದ ಮುಖ್ಯ ಚರಂಡಿ ಕಾಮಗಾರಿ ಕೈಗೊಳ್ಳದ ಕಾರಣ ಕೊಳಚೆ ನೀರು ನಿಂತು ದುರ್ನಾತಕ್ಕೆ ಕಾರಣವಾಗಿದೆ. ಕೆಲವು ಭಾಗಗಳಲ್ಲಿ ಚರಂಡಿಗಳ ವ್ಯವಸ್ಥೆ ಇಲ್ಲದೇ ಸಿಸಿ ರಸ್ತೆ ಹಾಳಾಗಿದೆ. ಇದರಿಂದ ನಿತ್ಯವೂ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ಗ್ರಾಮದ ಟಿಪ್ಪು ವೃತ್ತದ ಹತ್ತಿರ ರಾಜ ಕಾಲುವೆ ಕಾಮಗಾರಿ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇದರಿಂದ ಕೊಳಚೆ ನೀರು ಮುಂದೆ ಸಾಗದೇ ಅಕ್ಕೇ ಸಂಗ್ರಹವಾಗಿ ದುರ್ನಾತಕ್ಕೆ ಕಾರಣವಾಗಿದೆ. ಇನ್ನು ಗ್ರಾಮದ ಬಹುತೇಕ ವಾರ್ಡ್‌ಗಳಲ್ಲಿ ಸಿಸಿ ರಸ್ತೆಗಳು ಹಾಳಾಗಿದ್ದು ಇಕ್ಕಟ್ಟಾದ ಸಂದಿಗಳಲ್ಲಿ ಬೈಕ್‌ ಸಂಚಾರ ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ವೃದ್ಧರು, ಮಕ್ಕಳು ನಡೆದಾಡುವುದೇ ಕಷ್ಟವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. 

‘ಈ ಹಿಂದೆ ಜೆಜೆಎಂ ಕಾಮಗಾರಿಗಾಗಿ ರಸ್ತೆ ಮಧ್ಯೆ ಪೈಪ್‌ ಅಳವಡಿಕೆಗೆ ತೆಗೆದ ತಗ್ಗುಗಳಲ್ಲಿ ಮನೆಗಳ ಮೋರಿ ನೀರು ಹರಿಯುತ್ತಿದೆ. ಹೀಗಾಗಿ ಮತ್ತಷ್ಟು ಗಲೀಜು ಉಂಟಾಗಿದೆ. ತಗ್ಗುಗಳು ಬಿದ್ದು ತೊಂದರೆ ಆಗುತ್ತಿದೆ. ಗುಂಡಿ ಮುಚ್ಚುವಂತೆ ಹಲವು ಬಾರಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನಾವಗಿಲ್ಲ’ ಎಂದು ಜೈ ಕರ್ನಾಟಕ ಸಂಘಟನೆಯ ಗದಗ ತಾಲ್ಲೂಕು ಘಟಕದ ಉಪಾಧ್ಯಕ್ಷ ಇಮಾಮ್‌ಸಾಬ ಮಜ್ಜೂರ ಆಕ್ರೋಶ ವ್ಯಕ್ತಪಡಿಸಿದರು.

ಬಸ್ ನಿಲ್ದಾಣದ ಹತ್ತಿರ, ಸರ್ಕಾರಿ ಶಾಲೆ ಎದುರು ಇರುವ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಪರಿಣಾಮವಾಗಿ ಇಲ್ಲಿನ ನೂರಾರು ಮನೆಗಳ ಕೊಳಚೆ ನೀರು ಡಾಂಬರ್‌ ರಸ್ತೆ ಮೇಲೆ ಹರಿಯುವುದು ಸಾಮಾನ್ಯವಾಗಿದೆ. ಸತತವಾಗಿ ಕೊಳಚೆ ನೀರು ಹರಿಯುವುದರಿಂದ ರಸ್ತೆ ಹಾಳಾಗಿದ್ದು ಸಾರ್ವಜನಿಕರ ಸಂಚಾರ ದುಸ್ತರವಾಗಿದೆ. ಅಡ್ರಕಟ್ಟೆಯವರ ಪ್ಲಾಟ್‌ನಲ್ಲಿ ರಸ್ತೆ ಕಾಮಗಾರಿ ಅಪೂರ್ಣವಾಗಿದ್ದು ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.

‘ಗ್ರಾಮದಲ್ಲಿನ ಚರಂಡಿ ಕಾಮಗಾರಿ ಮತ್ತು ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಗ್ರಾಮದಲ್ಲಿನ ಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬಿದ್ದಿವೆ. ಕೂಡಲೇ ಸಿಸಿ ರಸ್ತೆ ದುರಸ್ತಿ, ಚರಂಡಿ ಕಾಮಗಾರಿ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

‘ಮತ್ತೆ ಅನುದಾನ ಬರುವ ನಿರೀಕ್ಷೆ’

ರಾಜಕಾಲುವೆ ನಿರ್ಮಾಣಕ್ಕೆ ಕಡಿಮೆ ಅನುದಾನ ಇದ್ದ ಕಾರಣ ಈ ಹಿಂದೆ ಕಾಮಗಾರಿ ನಡೆದಿಲ್ಲ. ಈಗ ಮತ್ತೆ ಅನುದಾನ ಬರುವ ನಿರೀಕ್ಷೆ ಇದೆ. ಬಂದ ನಂತರ ಕಾಮಗಾರಿ ಆಗಲಿದೆ. ಜಲ ಜೀವನ್‌ ಮಿಷನ್‌ (ಜೆಜೆಎಂ) ಕಾಮಗಾರಿಯಿಂದ ಸಿಸಿ ರಸ್ತೆ ಹಾಳಾಗಿದೆ. ಈ ಯೋಜನೆಯಲ್ಲೆ ಸಿಸಿ ರಸ್ತೆ ದುರಸ್ತಿ ನಡೆಯಬೇಕಿದೆ. ಮಾಲತೇಶ ಮೇವುಂಡಿ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT