ADVERTISEMENT

ಗದಗ | ಸಾಕಷ್ಟು ನೀರಿದ್ದರೂ ನೀಗದ ಬವಣೆ

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಪರದಾಟ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 10 ಮೇ 2025, 5:27 IST
Last Updated 10 ಮೇ 2025, 5:27 IST
ನೀರು ತುಂಬಲು ಕಷ್ಟ ಪಡುತ್ತಿರುವ ಕೊತಬಾಳ ಗ್ರಾಮದ ಮಹಿಳೆ
ನೀರು ತುಂಬಲು ಕಷ್ಟ ಪಡುತ್ತಿರುವ ಕೊತಬಾಳ ಗ್ರಾಮದ ಮಹಿಳೆ   

ಗದಗ: ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ನೀರು ಪೂರೈಸುವ ಜಲಮೂಲಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದೆ. ಆದರೆ, ಪೈಪ್‌ಲೈನ್‌ ಅವ್ಯವಸ್ಥೆ, ಕಣ್ಣಾಮುಚ್ಚಾಲೆ ಆಡುವ ವಿದ್ಯುತ್‌ನಿಂದಾಗಿ ಜನರು ನೀರು ಸಿಗದೇ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇರೀತಿ, ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ಬಂದ್‌ ಆಗಿದ್ದು, ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ.

ಗದಗ ಬೆಟಗೇರಿ ಅವಳಿ ನಗರಕ್ಕೆ ಹಮ್ಮಿಗಿ ಬ್ಯಾರೇಜ್‌ನಿಂದ ಪ್ರತಿನಿತ್ಯ 25ರಿಂದ 30 ಎಂಎಲ್‌ಡಿ ತುಂಗಭದ್ರ ನೀರು ಪೂರೈಕೆ ಆಗುತ್ತಿರುವುದಾಗಿ ನಗರಸಭೆ ಪೌರಾಯುಕ್ತ ರಮೇಶ್‌ ಪವಾರ್‌ ಹೇಳುತ್ತಾರೆ. ಆದರೆ, ಇಲ್ಲಿನ ಕೆಲವು ಬಡಾವಣೆಗಳಿಗೆ 10ರಿಂದ 15 ದಿನಗಳಾದರೂ ನೀರು ಬರುವುದಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ನೀರು ಸರಬರಾಜು ಆಗುತ್ತಿದ್ದರೂ ಅದು ಹೋಗುತ್ತಿರುವುದಾದರು ಎಲ್ಲಿಗೆ ಎಂದು ಹುಡುಕಿದರೆ ಅವೈಜ್ಞಾನಿಕ ಪೈಪ್‌ಲೈನ್‌ ವ್ಯವಸ್ಥೆ ಕಣ್ಣಿಗೆ ಬೀಳುತ್ತದೆ. ಪೂರೈಕೆ ಆಗುವ ನೀರಿನಲ್ಲಿ ಸೋರಿಕೆ ಪ್ರಮಾಣವೇ ಅಧಿಕವಾಗಿರುವ ಕಾರಣ ಅವಳಿ ನಗರದ ಜನರಿಗೆ ಜಲ ಬವಣೆ ಎದುರಾಗಿದೆ.

ಕುಡಿಯುವ ನೀರು ಸರಬರಾಜಿಗೆ ಸಂಬಂಧಪಟ್ಟಂತೆ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸ್ಥಿತಿ ಗಂಭೀರವಾಗಿದೆ. ಇಲ್ಲಿ 20 ದಿನಕ್ಕೊಮ್ಮೆ ಎರಡು ತಾಸು ನೀರು ಬರುತ್ತಿದ್ದು, ಜನರಿಗೆ ಎದುರಾಗಿರುವ ನೀರಿನ ಸಂಕಷ್ಟವನ್ನು ತೆರೆದಿಡುತ್ತದೆ. ಜತೆಗೆ ಇಲ್ಲಿ ಪೂರೈಕೆಯಾಗುವ ನೀರಿನಲ್ಲಿ ಹುಳುಗಳು ಕೂಡ ಬರುತ್ತಿದ್ದು, ಜನರು ಆರೋಗ್ಯದ ಬಗ್ಗೆ ಚಿಂತಿತರಾಗಿದ್ದಾರೆ.

ADVERTISEMENT

ಅದೇರೀತಿ ಶಿರಹಟ್ಟಿ, ನರೇಗಲ್‌, ಮುಳಗುಂದ ಪಟ್ಟಣದಲ್ಲಿ ಎಂಟರಿಂದ ಹತ್ತು ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದೆ. ನರೇಗಲ್‌ ಪಟ್ಟಣದಲ್ಲೂ ನೀರಿನೊಂದಿಗೆ ಹುಳುಗಳು ಬರುತ್ತಿವೆ. ಹುಳು ಇಲ್ಲವಾದರೆ ಗೊಡಗು, ಜೊಂಡು, ಹೊಲಸು ನೀರಿನೊಂದಿಗೆ ಬರುತ್ತಿದೆ.

ಪೈಪ್‌ಲೈನ್‌ ಅವ್ಯವಸ್ಥೆ, ನಿರ್ವಹಣೆ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಜೇಂದ್ರಗಡ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವು ಗ್ರಾಮಗಳಿಗೆ ಮಲಪ್ರಭೆ ನದಿ ನೀರು ಪೂರೈಕೆಯಲ್ಲಿ ಆಗಾಗ ಸಮಸ್ಯೆ ಉಂಟಾಗುತ್ತಿದೆ. ರೋಣ ತಾಲ್ಲೂಕಿನ ಪಟ್ಟಣ ಪ್ರದೇಶಗಳು ಕುಡಿಯುವ ನೀರಿನ ಸಮಸ್ಯೆಯಿಂದ ಭಾಗಶಃ ನಿರಾಳವಾಗಿದ್ದರೂ ಗ್ರಾಮೀಣ ಭಾಗದಲ್ಲಿ ಮಾತ್ರ ಸಮಸ್ಯೆ ಮುಂದುವರಿದಿದೆ.

ಜಿಲ್ಲೆಯ ಬಹುತೇಕ ತಾಲ್ಲೂಕು ಹಾಗೂ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಆಸರೆಯಾಗಿವೆ. ಆದರೆ, ಜಿಲ್ಲೆಯ ಅನೇಕ ಕಡೆಗಳಲ್ಲಿ ಅವುಗಳ ನಿರ್ವಹಣೆ ಸರಿಯಾಗಿಲ್ಲ. ಆದಕಾರಣ, ಶುದ್ಧ ನೀರಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿರಹಟ್ಟಿ ತಾಲ್ಲೂಕಿನಲ್ಲಿ ಈ ಸಮಸ್ಯೆ ತೀವ್ರವಾಗಿದ್ದು, ಜನರು ಫ್ಲೋರೈಡ್‌ಯುಕ್ತ ನೀರು ಸೇವಿಸಿ ಅನೇಕ ರೋಗಗಳಿಗೆ ತುತ್ತಾಗಿದ್ದಾರೆ. ಆದರೂ, ಶುದ್ಧ ನೀರು ಒದಗಿಸುವಲ್ಲಿ ಅಧಿಕಾರಿ ವರ್ಗ ಕ್ರಮವಹಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಇಲ್ಲ; ಎಲ್ಲವೂ ಸರಿ ಇದೆ ಎಂದು ಹೇಳುವುದನ್ನು ಅಧಿಕಾರಿಗಳು ನಿಲ್ಲಿಸಬೇಕು. ಒಂದು ಹಳ್ಳಿ ಅಥವಾ ಒಂದು ವಾರ್ಡ್‌ಗೆ ಕುಡಿಯುವ ನೀರು ಸಿಕ್ಕಿಲ್ಲವೆಂದರೂ ಅದು ಸಮಸ್ಯೆಯೇ ಎಂಬುದನ್ನು ಅರಿತುಕೊಂಡು ಜಲ ಬವಣೆ ನೀಗಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಭರತ್ ಎಸ್‌.
ಮುಳಗುಂದ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತವಾಗಿ ಯಂತ್ರಗಳು ಹಾಳಾಗಿದೆ

ಬೇಸಿಗೆ ಕಾರಣಕ್ಕೆ ನೀರಿನ ಸಮಸ್ಯೆ ಎದುರಾಗಿಲ್ಲ: ಸಿಇಒ ಭರತ್‌ ಎಸ್‌

‘ಸದ್ಯದವರೆಗೆ ಜಿಲ್ಲೆಯ ಯಾವುದೇ ಹಳ್ಳಿಗಳಲ್ಲೂ ಕುಡಿಯುವ ನೀರಿನ ಅಭಾವ ಇಲ್ಲ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭರತ್‌ ಎಸ್‌. ತಿಳಿಸಿದ್ದಾರೆ. ‘ನೀರು ಪೂರೈಕೆಗೆ ತೊಡಕಾಗುವಂತಹ ಸಮಸ್ಯೆಗಳು ಎಲ್ಲ ಜಿಲ್ಲೆಯಲ್ಲಿ ಸಾಮಾನ್ಯ. ಆದರೆ ಬೇಸಿಗೆ ಕಾರಣಕ್ಕಾಗಿ ನೀರಿನ ಸಮಸ್ಯೆ ಗದಗ ಜಿಲ್ಲೆಯಲ್ಲಿ ಇನ್ನೂ ಬಂದಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ‘ಸದ್ಯದ ಮಟ್ಟಿಗೆ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದಿಲ್ಲ. ಅದೇರೀತಿ ಯಾವುದೇ ಗ್ರಾಮಗಳಿಗೂ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿಲ್ಲ’ ಎಂದು ಹೇಳಿದರು. ‘ಈ ಬಾರಿ ಮುಂಗಾರು ಬೇಗ ಆರಂಭವಾಗುವ ನಿರೀಕ್ಷೆ ಇದೆ. ಮಳೆ ಬೇಗ ಆರಂಭಗೊಂಡರೆ ಕುಡಿಯುವ ನೀರಿನ ಸಮಸ್ಯೆ ಸಂಪೂರ್ಣ ಇಲ್ಲವಾಗಲಿದೆ’ ಎಂದರು. ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿ ಮುಗಿದಿರುವ ಕಾರಣ ಜಿಲ್ಲೆಯ ವಿವಿಧೆಡೆ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್‌ ಆಗಿವೆ. ಇನ್ನು ಕೆಲವೆಡೆ ಗುತ್ತಿಗೆದಾರರು ಅವುಗಳ ದುರಸ್ತಿಗೆ ಆಸಕ್ತಿ ವಹಿಸಿಲ್ಲ. ದುರಸ್ತಿಗೆ ಖರ್ಚಾಗುವಷ್ಟು ಹಣವನ್ನು ಗುತ್ತಿಗೆದಾರರಿಗೆ ಕೊಡಬೇಕಿರುವ ಹಣದಲ್ಲಿ ಮುಟ್ಟುಗೋಲು ಹಾಕಿಕೊಂಡು ಹೊಸ ಟೆಂಡರ್‌ ಕರೆಯಲು ಕ್ರಮವಹಿಸಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಬಿಗಿಯಾದ ಕ್ರಮ ಅನುಸರಿಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.