ಗದಗ: ‘ಅವಳಿ ನಗರದಲ್ಲಿ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಹದಗೆಟ್ಟು ಹಲವು ವರ್ಷಗಳೇ ಉರುಳಿದ್ದರೂ ಈವರೆಗೆ ಶಾಸಕ ಎಚ್.ಕೆ.ಪಾಟೀಲರು ಚಕಾರ ಎತ್ತಿರಲಿಲ್ಲ. ಅಧಿಕಾರಿಗಳ ಲೋಪವಿದ್ದರೂ ಈ ಬಗ್ಗೆ ಚಾಟಿ ಬೀಸದ ಶಾಸಕರು ಚುನಾವಣೆ ಸಮೀಪಿಸುತ್ತಿದ್ದಂತೆ ಮಾತನಾಡುತ್ತಿರುವುದು ಕೇವಲ ರಾಜಕೀಯ ಸ್ಟಂಟ್ ಅಷ್ಟೇ’ ಎಂದುಬಿಜೆಪಿ ಮುಖಂಡ ವಿಜಯಕುಮಾರ ಗಡ್ಡಿ ಲೇವಡಿ ಮಾಡಿದರು.
ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಗದಗ ಬೆಟಗೇರಿ ನಗರಸಭೆಗೆ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಅವಧಿ ಮುಗಿದ ನಂತರ ಜಿಲ್ಲಾಧಿಕಾರಿ ಆಡಳಿತಾಧಿಕಾರಿಯಾಗಿದ್ದಾಗಲೂ ಶಾಸಕರು ಅಧಿಕಾರದಲ್ಲಿದ್ದರು. ಆ ವೇಳೆ ಕುಡಿಯುವ ನೀರಿನ ಬಗ್ಗೆ ಮಾತನಾಡದ ಶಾಸಕರು ಈಗ ಮಾತನಾಡುತ್ತಿದ್ದಾರೆ’ ಎಂದು ಹೇಳಿದರು.
‘ಉದ್ದೇಶಪೂರ್ವಕವಾಗಿ ಕೆಲವು ವಾರ್ಡ್ಗಳಿಗೆ ನೀರು ಪೂರೈಕೆ ಮಾಡುತ್ತಿಲ್ಲ ಎಂದುಆಪಾದಿಸುವ ಶಾಸಕರಿಗೆ ಕೆಲವು ನಗರಸಭೆ ಸದಸ್ಯರು ವಾಲ್ಮನ್ಗಳನ್ನು ಹೆದರಿಸಿ ತಮಗೆ ಇಷ್ಟ ಬಂದಂತೆ ವಾಲ್ ತಿರುಗಿಸಿಕೊಳ್ಳುತ್ತಿದ್ದಾರೆ. ಇದು ಅವರಿಗೆ ಗೊತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.
‘ಎ’ ಪಾಯಿಂಟ್ನಿಂದ ಫ್ಲೋ ಮೀಟರ್ ಬಗ್ಗೆ ಅಧಿಕಾರಿಗಳು ಶಾಸಕರ ಹಾದಿ ತಪ್ಪಿಸಿದ್ದು, ನಗರಕ್ಕೆ ಬರುವ ನೀರಿನ ಪ್ರಮಾಣ ಕಡಿಮೆ ಇದೆ. 25 ಕಡೆಗಳಲ್ಲಿ ಕುಡಿಯುವ ನೀರು ಸೋರಿಕೆಯಾಗುತ್ತಿದೆ. ಈ ಬಗ್ಗೆ ಶಾಸಕರು ಗಮನ ಹರಿಸಿದ್ದರೆ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು’ ಎಂದು ತಿರುಗೇಟು ನೀಡಿದರು.
‘ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನವೇ ವಾಲ್ಮನ್ಗಳ ವೇತನ ಬಾಕಿ ಉಳಿದಿತ್ತು. ಹಿಂದಿನ ಕಾಂಗ್ರೆಸ್ ಅಧಿಕಾರಾವಧಿಯಲ್ಲಿಯೇ ನೀರು ಪೂರೈಕೆಗೆ ಗುತ್ತಿಗೆ ನೀಡಿತ್ತು. ಅವರಿಗೆ ವಾಲ್ಮನ್ಗಳ ಉಸ್ತುವಾರಿ ಸಹ ವಹಿಸಲಾಗಿತ್ತು. ಈ ಬಗ್ಗೆ ಮಾತನಾಡುವ ಶಾಸಕರು, ಇದೀಗ ಸಂಚಿದೆ ಎಂದು ಆಪಾದಿಸುವುದು ಸರಿಯಲ್ಲ’ ಎಂದು ಹೇಳಿದರು.
‘33ನೇ ವಾರ್ಡ್ನಲ್ಲಿರುವ ಓವರ್ ಹೆಡ್ ಟ್ಯಾಂಕ್ ಮೂಲಕ 15 ದಿನಗಳಲ್ಲಿ 24/7 ನೀರು ಪೂರೈಕೆ ಮಾಡಿ ತೋರಿಸುತ್ತೇವೆ’ ಎಂದು ಆಶ್ವಾಸನೆ ನೀಡಿದರು.
‘24/7 ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನದಲ್ಲಿ ಮಾರ್ಗದರ್ಶನ ನೀಡುವಂತೆ ಶಾಸಕರು ಸಮಿತಿ ರಚಿಸಿದ್ದಾರೆ. ಈ ಮೂಲಕ ಅವರು ತಮಗೆ ಈ ಯೋಜನೆ ಬಗ್ಗೆ ಸ್ವಲ್ಪವೂ ತಿಳಿವಳಿಕೆ ಇಲ್ಲ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ’ ಎಂದು ಕಾಲೆಳೆದರು.
ಸುಧೀರ ಕಾಟೀಗರ, ಶಂಕರ ಖಾಕಿ, ಲಕ್ಷ್ಮಣ ದೊಡ್ಡಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.