
ಗದಗ: ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಅವರ ದಾಖಲೆ ಮುರಿದು ದೀರ್ಘಾವಧಿಯ ಸಿಎಂ ಎನ್ನುವ ಹೆಗ್ಗಳಿಕೆಗೆ ಪಾತ್ರರಾದ ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯಲಿ ಎಂದು ಅಭಿಮಾನಿ ಬಳಗದವರು ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ರೈತ ಸಂಘದ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಮಾತನಾಡಿ, ‘ರಾಜ್ಯ ರಾಜಕಾರಣದ ಇತಿಹಾಸದ ಪುಟಗಳಲ್ಲಿ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದಾಖಲೆ ಸಿದ್ದರಾಮಯ್ಯನವರ ಹೆಸರಲ್ಲಿ ಅಚ್ಚಾಗಿದೆ. ಮೈಸೂರಿನ ಸಿದ್ದರಾಮನ ಹುಂಡಿ ಗ್ರಾಮದ ಸಾಮಾನ್ಯ ರೈತ ಕುಟುಂಬದಿಂದ ಬಂದ ಸಿದ್ದರಾಮಯ್ಯ ವಿಧಾನಸೌಧದ ಶಕ್ತಿಪೀಠದಲ್ಲಿ ದೀರ್ಘಕಾಲ ಕುಳಿತು ಆಡಳಿತ ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ’ ಎಂದು ಹೇಳಿದರು.
‘ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಜನರಿಗೆ ನೀಡಿದ್ದ ಗ್ಯಾರಂಟಿ ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದಾರೆ’ ಎಂದು ಹೇಳಿದರು.
ಬಾಳಪ್ಪ ಗಂಗರಾತ್ರಿ, ರಾಮಪ್ಪ ಹಚ್ಚಪ್ಪನವರ, ಶರಣಪ್ಪ ಜೋಗಿನ, ಮಲ್ಲಪ್ಪ ಇದ್ಲಿ, ಸಂಗಪ್ಪ ಮಳ್ಳಿ, ಚಿನ್ನಪ್ಪ ಬಿಸನಳ್ಳಿ, ವಿರುಪಾಕ್ಷಪ್ಪ ಸೋಮಾಪೂರ, ಹನುಮಪ್ಪ ಜೋಗಿನ, ಭೀಮಪ್ಪ ಆಲೂರು, ಕಪ್ಪತ್ತಪ್ಪ ಸೋಂಪೂರ, ರಾಮಣ್ಣ ಗಾಣದ, ಮಾರುತಿ ಬಾಬರಿ, ಮುದುವಪ್ಪ ದೇವರವರ, ವೆಂಕಟೇಶ ಪೂಜಾರ, ಶಂಕ್ರಪ್ಪ ಪೂಜಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.