ಗಜೇಂದ್ರಗಡ: ಪಟ್ಟಣದಲ್ಲಿ ಬೀದಿ ನಾಯಿಗಳ ದಾಳಿಯಿಂದ ಇತ್ತೀಚೆಗೆ ಮಹಿಳೆಯೊಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡು ಪುರಸಭೆ ಅಧಿಕಾರಿಗಳು ಶುಕ್ರವಾರ ಹಾಗೂ ಶನಿವಾರ ಬೀದಿ ನಾಯಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದೆ.
ಪಟ್ಟಣದ ಕಟ್ಟಿ ಬಸವೇಶ್ವರ ರಂಗ ಮಂದಿರ, ಚೋಳಿನವರ ಓಣಿ, ಹಿರೇಬಜಾರ, ಬೂದಿಹಾಳ ಅವರ ಓಣಿ, ನವನಗರ, ಜವಳಿ ಪ್ಯಾಟ್, ಕೆಳಗಲ ಪೇಟೆ, ನೇಕಾರ ಕಾಲೊನಿ, ಗಂಜಿ ಪೇಟೆ, ವಾಣಿ ಪೇಟೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಎರಡು ದಿನದಲ್ಲಿ 204 ನಾಯಿಗಳನ್ನು ಸೆರೆ ಹಿಡಿಯಲಾಗಿದೆ.
ಈ ಕಾರ್ಯಾಚರಣೆಗೆ ಮೈಸೂರಿನಿಂದ 8 ಜನರ ತಂಡ ಬಂದಿದ್ದು, ಸೆರೆ ಹಿಡಿದ ನಾಯಿಗಳನ್ನು ಶುಕ್ರವಾರ ಗಂಗಾವತಿ ಹತ್ತಿರ ಬಿಡಲಾಗಿದೆ. ಶನಿವಾರ ಹಿಡಿದ ನಾಯಿಗಳನ್ನು ಹೊಸಪೇಟೆ ಹತ್ತಿರವಿರುವ ಗುಡ್ಡದಲ್ಲಿ ಬಿಡಲಾಗಿದೆ. ಈ ಕಾರ್ಯಾಚರಣೆ ಮೇ 18ರವರೆಗೆ ನಡೆಯಲಿದೆ.
ಒಂದು ನಾಯಿ ಸೆರೆ ಹಿಡಿಯಲು ₹350 ಪುರಸಭೆ ವತಿಯಿಂದ ನೀಡಲಾಗುತ್ತದೆ ಎಂದು ಪುರಸಭೆ ಆರೋಗ್ಯ ನೀರೀಕ್ಷಕ ಶಿವಕುಮಾರ ಇಲಾಳ ಮಾಹಿತಿ ನೀಡಿದರು.
'ಪಟ್ಟಣದ ಎಲ್ಲ ವಾರ್ಡ್ಗಳಲ್ಲಿರುವ ಬೀದಿ ನಾಯಿಗಳನ್ನು ಸೆರೆ ಹಿಡಿಯಲಾಗುತ್ತಿದೆ. ಅದರಂತೆ ಬೀದಿ ದನಗಳ ಹಾವಳಿಗೂ ಕಡಿವಾಣ ಹಾಕಲಾಗುತ್ತದೆ' ಎಂದು ಪುರಸಭೆ ಅಧ್ಯಕ್ಷ ಸುಭಾಷ್ ಮ್ಯಾಗೇರಿ ಪ್ರತಿಕ್ರಿಯೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.