ಗಜೇಂದ್ರಗಡ ಸಮೀಪದ ರಾಜೂರ ಗ್ರಾಮದಲ್ಲಿ ರಾಜೂರು ಹಾಗೂ ದಿಂಡೂರು ಗ್ರಾಮಗಳ ಅಲೈ ದೇವರುಗಳ ಪರಸ್ಪರ ಭೇಟಿ ನಡೆಯಿತು
ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮೊಹರಂ ಆಚರಣೆ ಪ್ರಯುಕ್ತ ವಿವಿಧ ಮಸೀದಿಗಳಲ್ಲಿ ಐದು ದಿನಗಳ ಕಾಲ ಪ್ರತಿಷ್ಠಾಪಿಸಿದ್ದ ಪಂಜಾ(ಅಲೈ) ದೇವರುಗಳನ್ನು ಹಬ್ಬದ ಕೊನೆಯ ದಿನ ಪರಸ್ಪರ ಭೇಟಿ ಮಾಡುವ ಮೂಲಕ ಮೆರವಣಿಗೆ ನಡೆಸಿದರು.
ಪಟ್ಟಣದ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಪಂಜಾ ದೇವರುಗಳನ್ನು ಬೆಳಿಗ್ಗೆ ಇಲ್ಲಿನ ರಾಜವಾಡೆ ಬಯಲು ಜಾಗೆಯಲ್ಲಿ ಪರಸ್ಪರ ಭೇಟಿ ನೀಡಿ, ಭಕ್ತರಿಂದ ವಿಶೇಷ ಪೂಜೆ ನಡೆಸಿದ ಬಳಿಕ ಪುನಃ ಮಸೀದಿಗಳಿಗೆ ತೆರೆಳಿದವು. ಸಂಜೆ ದೇವರುಗಳು ಹೊಳೆಗೆ ಹೋದವು.
ಸಮೀಪದ ರಾಜೂರ ಗ್ರಾಮದಲ್ಲಿ ರಾಜೂರ ಹಾಗೂ ದಿಂಡೂರು ಗ್ರಾಮಗಳ ಅಲೈ ದೇವರುಗಳು ಪರಸ್ಪರ ಭೇಟಿ ನೀಡಿದವು. ತಾಲ್ಲೂಕಿನ ಗೋಗೇರಿ, ನಾಗರಸಕೊಪ್ಪ, ಲಕ್ಕಲಕಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿಯೂ ಸಹ ಅಲೈ ದೇವರುಗಳ ಪರಸ್ಪರ ಭೇಟಿ ಹಾಗೂ ವಿಶೇಷ ಪೂಜೆ ನಡೆಯಿತು.
ಮೆರವಣಿಗೆಯಲ್ಲಿ ಅಲೈ ಪದಗಳನ್ನು ಹಾಡುವುದು, ಹುಲಿ ವೇಷ, ಅಳ್ಳೊಳ್ಳಿ ಬೊವ್ವ ವೇಷಧಾರಿಗಳು ಹಾಗೂ ಹೆಜ್ಜೆ ಮೇಳದವರು ಹಲಗೆ ನಾದಕ್ಕೆ ತಕ್ಕಂತೆ ಕುಣಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.