ADVERTISEMENT

ಗಜೇಂದ್ರಗಡ: ಬಸ್‌ ನಿಲ್ದಾಣದಲ್ಲಿ ಸೌಲಭ್ಯ ಕೊರತೆ

ಶುದ್ಧ ನೀರು, ಸ್ವಚ್ಛತೆ, ಪಾರ್ಕಿಂಗ್‌ ಸೌಲಭ್ಯವಿಲ್ಲದೇ ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 4:31 IST
Last Updated 24 ಜನವರಿ 2026, 4:31 IST
ಗಜೇಂದ್ರಗಡದ ಬಸ್‌ ನಿಲ್ದಾಣದ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ ಪಕ್ಕದ ಖಾಲಿ ಜಾಗ ಬಯಲು ಶೌಚಾಲಯವಾಗಿದೆ
ಗಜೇಂದ್ರಗಡದ ಬಸ್‌ ನಿಲ್ದಾಣದ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ ಪಕ್ಕದ ಖಾಲಿ ಜಾಗ ಬಯಲು ಶೌಚಾಲಯವಾಗಿದೆ   

ಗಜೇಂದ್ರಗಡ: ಪಟ್ಟಣದ ಬಸ್‌ ನಿಲ್ದಾಣದಲ್ಲಿ ಸಮರ್ಪಕ ಮೂಲ ಸೌಲಭ್ಯಗಳಿಲ್ಲದ ಕಾರಣ ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಬಸ್‌ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಸಮರ್ಪಕ ಆಸನಗಳಿಲ್ಲ. ಅಲ್ಲದೆ ವೃದ್ಧರಿಗೆ ಆಸರೆಯಾಗಿ ಕುಳಿತುಕೊಳ್ಳುವಂತ ಆಸನಗಳಿಲ್ಲ. ಹೀಗಾಗಿ ವೃದ್ಧರಿಗೆ ತೊಂದರೆಯಾಗುತ್ತಿದೆ. ನಿಲ್ದಾಣದಲ್ಲಿ ನಾಲ್ಕೈದು ಅಂಗಡಿಗಳಿದ್ದು, ಪ್ರಯಾಣಿಕರು ಅವುಗಳಲ್ಲಿ ಖರೀದಿಸಿದ ಕುರುಕಲು ತಿಂಡಿಗಳ ಪ್ಲಾಸ್ಟಿಕ್‌ ಹಾಳೆಗಳನ್ನು ಕಸದ ಬುಟ್ಟಿಗಳಿಗೆ ಹಾಕುವ ಬದಲು ಎಲ್ಲೆಂದರಲ್ಲಿ ಎಸೆಯುವುದರಿಂದ ಸ್ವಚ್ಛತೆಯಿಲ್ಲದಂತಾಗಿದೆ.

ನಿಲ್ದಾಣದ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ ಪಕ್ಕದಲ್ಲಿನ ಬಯಲು ಜಾಗೆ ಬಯಲು ಶೌಚಾಲಯವಾಗಿದ್ದು, ಗಬ್ಬೆದ್ದು ನಾರುತ್ತಿದೆ. ಪಟ್ಟಣದ ಪುರಸಭೆ ಅಧಿಕಾರಿಗಳು ಇಂದಿರಾ ಕ್ಯಾಂಟಿನ್‌ ಉದ್ಘಾಟನೆ ಸಂದರ್ಭದಲ್ಲಿ ಶಾಸಕರ ಸಮ್ಮುಖದಲ್ಲಿ ಸುತ್ತ ಆವರಣ ಗೋಡೆ ನಿರ್ಮಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ. ಬಸ್‌ ನಿಲ್ದಾಣಕ್ಕೆ ಎರಡು ದ್ವಾರಗಳಿದ್ದು, ಒಂದು ದ್ವಾರದಲ್ಲಿ ಕಾಂಕ್ರಿಟ್‌ ಹಾಗೂ ಪ್ಲೇವರ್ಸ್ ನಡುವೆ ಗುಂಡಿ ನಿರ್ಮಾಣವಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಅಲ್ಲದೆ ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಯಿಂದ ತೊಂದರೆಯಾಗುತ್ತಿದೆ.

ADVERTISEMENT

ʼಬಸ್‌ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಶೌಚಾಲಯದಲ್ಲಿ ಹಾಗೂ ನಿಲ್ದಾಣದ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು. ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಇನ್ನಷ್ಟು ಬಸ್‌ಗಳನ್ನು ಬಿಡಬೇಕುʼ ಎಂದು ಪ್ರಯಾಣಿಕರಾದ ಪೃಥ್ವಿರಾಜ, ಜಯಮ್ಮ ಆಗ್ರಹಿಸಿದರು.

ʼಗಜೇಂದ್ರಗಡ ಬಸ್‌ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಆಸನಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ನಿಲ್ದಾಣದ ಪ್ರವೇಶ ದ್ವಾರದಲ್ಲಿನ ಗುಂಡಿಯನ್ನು ಈ ಹಿಂದೆ ಸರಿಪಡಿಸಲಾಗಿತ್ತು. ಮತ್ತೊಮ್ಮೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದುʼ ಎಂದು ಡಿಪೋ ವ್ಯವಸ್ಥಾಪಕ ಕೆ.ಎಸ್.ಜಿಗಳೂರ ಪ್ರತಿಕ್ರಿಯೆ ನೀಡಿದರು.

ಗಜೇಂದ್ರಗಡದ ಬಸ್‌ ನಿಲ್ದಾಣದಲ್ಲಿ ಸಮರ್ಪಕ ಆಸನಗಳ ವ್ಯವಸ್ಥೆಯಿಲ್ಲದ ಕಾರಣ ನೆಲದ ಮೇಲೆ ಕುಳಿತಿರುವ ಪ್ರಯಾಣಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.