ಗದಗ: ‘ಶಿಕ್ಷಣದ ಜೊತೆ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಬದುಕು ಕಟ್ಟಿಕೊಡುವ ಜೀವನದ ಪಾಠವನ್ನು ಕಲಿಸುವ ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷತನ ಬೇಡವೆಂದು’ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಹೇಳಿದರು.
ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಆಯೋಜಿಸಿದ್ದ 2025ನೇ ಸಾಲಿನ ಜಿಲ್ಲಾಮಟ್ಟದ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂದಿವೆ. ಪ್ರತಿ ಮಗುವಿಗೆ ಶಿಕ್ಷಣ ಸಿಗಬೇಕು ಎಂಬುದನ್ನು ಸರ್ಕಾರದ ಆದ್ಯತೆ. ಅದಕ್ಕಾಗಿ 50ಕ್ಕೂ ಹೆಚ್ಚು ಅಗತ್ಯ ಮೂಲ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಜೊತೆಗೆ ಉಚಿತ ಶಿಕ್ಷಣವನ್ನು ಸರ್ಕಾರ ನೀಡುತ್ತಿದೆ’ ಎಂದರು.
‘ಇಂಗ್ಲಿಷ್ ಮಾಧ್ಯಮ ಶಾಲೆಗಳ ವ್ಯಾಮೋಹದಲ್ಲಿ ಪಾಲಕರು ದುಬಾರಿ ವೆಚ್ಚ ಮಾಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳದೇ ವಂಚಿತರಾಗುತ್ತಿದ್ದಾರೆ. ಎಲ್ಲರೂ ಸರ್ಕಾರಿ ಶಾಲೆಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಶಾಲಾ ದತ್ತು ಉಸ್ತುವಾರಿ ಪಡೆದ ಬಸವರಾಜ ಧಾರವಾಡ, ಡೈಯಟ್ ಪ್ರಾಚಾರ್ಯ ಜಿ.ಎಲ್. ಬಾರಾಠಕ್ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಟೆಪ್ಪನವರ, ವಿ.ವಿ. ನಡುವಿನಮನಿ, ಉಪನ್ಯಾಸಕ ರವಿ ಪ್ರಕಾಶ, ಶಿಕ್ಷಕರ ಸಂಘಟನೆಯ ಬಿ.ಎಫ್. ಪೂಜಾರ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ನಂದಾ ಅಶೋಕ ಖಟವಟೆ, ನಗರಸಭಾ ಸದಸ್ಯಣಿ ವಿದ್ಯಾವತಿ ಗಡಗಿ, ಶಂಕರ ಹಡಗಲಿ, ವಿ.ಎಂ. ಹಿರೇಮಠ, ಮಹೇಶ ಕುಚಬಾಳ, ವಿಜಯ ಕಿರೇಸೂರ, ಬಿ.ಕೆ. ನಿಂಬನಗೌಡ್ರ, ಎಸ್.ಆರ್. ಬಂಡಿ, ಎಫ್.ಸಿ. ಅಬ್ಬಿಗೇರಿ ಪ್ರಭಾರಿ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ಅಣ್ಣಿಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.