ಗದಗ: ‘ವಿದ್ಯಾರ್ಥಿಗಳು ಕಲಿಸಿದ ಗುರುಗಳಿಗಿಂತ ಉನ್ನತ ಸ್ಥಾನ ತಲುಪಬೇಕು. ಆಗ ಮಾತ್ರ ವಿದ್ಯೆ ಕಲಿಸಿದ ಗುರುಗಳಲ್ಲಿ ಸಾರ್ಥಕಭಾವ ಮೂಡುತ್ತದೆ’ ಎಂದು ಮುಕ್ಕಣ್ಣೇಶ್ವರ ಮಠದ ಶಂಕರಾನಂದ ಸ್ವಾಮೀಜಿ ಹೇಳಿದರು.
ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯಲ್ಲಿ 2004-2005ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿರುವುದು ಶ್ಲಾಘನೀಯ. ಯುವಜನರು ಪಾಶ್ಚಿಮಾತ್ಯ ಸಂಸ್ಕೃತಿಗೆ ಅಂಟಿಕೊಳ್ಳದೇ ನಮ್ಮ ದೇಶದ ಸಂಸ್ಕೃತಿ ಅರಿತು, ಆಚರಿಸಬೇಕು’ ಎಂದರು.
ನಿವೃತ್ತ ಡಿಡಿಪಿಐ ಎ.ಎನ್.ನಾಗರಳ್ಳಿ ಮಾತನಾಡಿ, ‘ಇಂದಿನ ದಿನಗಳಲ್ಲಿ ಮಕ್ಕಳು ವಿದೇಶಗಳಲ್ಲಿ ನೌಕರಿ ಮಾಡುತ್ತಿರುವುದು ಒಂದು ಕಡೆ ನೆಮ್ಮದಿ ಇದ್ದರೆ. ಅವರಲ್ಲಿ ಕೆಲವರು ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಎಷ್ಟೇ ಕಷ್ಟವಾದರೂ ಹೆತ್ತವರ ಆರೈಕೆ ಮಾಡಬೇಕು’ ಎಂದರು.
ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಅಕ್ಷರ ದಾಸೋಹದ ಶಂಕರ ಹಡಗಲಿ, ಶಿಕ್ಷಕ ಸಿ.ಎಂ. ಮಾರನಬಸರಿ ಮಾತನಾಡಿದರು.
ವೈ.ಆರ್. ಹಿರೇಗೌಡರ, ಬಿ.ಎಲ್. ಹೊಸಳ್ಳಿ, ಸಿ.ಎಂ. ಮಾರನಬಸರಿ, ಕೆ.ಎಂ. ಮೂಲಿಮನಿ, ವಿ.ಜಿ. ಕಾಂಬಳೇಕರ, ಎಸ್.ಐ. ಹಡಪದ, ಆರ್.ಎಸ್. ರಜಪೂತ, ಎಚ್.ಎಸ್. ಬ್ಯಾಳಿ, ಎಸ್.ಎಂ. ಹರಿಜನ, ಆರ್.ಆರ್. ಮಿಠಡೆ, ಬಿ.ವೈ. ಶರಣಬಸಣ್ಣವರ ಗುರುವಂದನೆ ಸ್ವೀಕರಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ ಮಾತನಾಡಿ, ‘ಇಲ್ಲಿ ಸೇವೆ ಸಲ್ಲಿಸಿದ ಸಿಬ್ಬಂದಿ ಹಾಗೂ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಸಹಕಾರದಿಂದ ಶಿಕ್ಷಣ ಸಂಸ್ಥೆ ಬೆಳೆಯಲು ಅವಕಾಶವಾಗಿದೆ. ಮುಂದೆಯೂ ನಿಮ್ಮೆಲ್ಲರ ಸಹಕಾರ ಇರಬೇಕು’ ಎಂದು ಮನವಿ ಮಾಡಿದರು.
ಗೌರಮ್ಮ ಕೊಳ್ಳಿ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಮಹಮ್ಮದ್ ನದಾಫ್ ಸ್ವಾಗತಿಸಿದರು. ಎಸ್.ಎಂ. ಹಡಪದ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.