ಗದಗ: ‘ಕಾಂಗ್ರೆಸ್ನ ನಿಷ್ಟಾವಂತ ನಾಯಕ ಎಚ್.ಕೆ.ಪಾಟೀಲ ಅವರ ವಿರುದ್ಧ ಆಧಾರರಹಿತ ಆರೋಪ ಮಾಡುವುದನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಸಹಿಸುವುದಿಲ್ಲ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್.ಪಾಟೀಲ ತಿಳಿಸಿದರು.
‘ಈ ಹಿಂದಿನ ಚುನಾವಣೆಗಳಲ್ಲಿ ತಮ್ಮ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ ಅವರ ಮಧ್ಯೆ ಹೊಂದಾಣಿಕೆ ಇತ್ತು ಎಂಬ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರ ಹೇಳಿಕೆ ಖಂಡನೀಯ. ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಡೆಯುವ ಸಂದರ್ಭದಲ್ಲಿ ಅವರು ಎಚ್.ಕೆ.ಪಾಟೀಲರ ತೇಜೋವಧೆಗೆ ಪಿತೂರಿ ನಡೆಸಿದ್ದಾರೆ’ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
‘ಈ ಹಿಂದಿನ ಚುನಾವಣೆಗಳಲ್ಲಿ ಒಳ ಒಪ್ಪಂದ ಇತ್ತು ಎಂದು ಹೊರಟ್ಟಿ ಅವರು ಹೇಳಿಕೆ ನೀಡಿರುವುದು ಖಂಡನೀಯ. ಒಂದು ವೇಳೆ ಹೀಗೆ ಇದ್ದಿದ್ದರೆ, 2008ರ ಚುನಾವಣೆಯಲ್ಲಿ ಎಚ್.ಕೆ.ಪಾಟೀಲ ಸೋಲುತ್ತಿರಲಿಲ್ಲ. ಅವರು ಎಚ್.ಕೆ.ಪಾಟೀಲರ ವಿರುದ್ಧ ಮಾಡಿರುವ ಆರೋಪವನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.‘ಪಕ್ಷ ಮತ್ತು ಸರ್ಕಾರದಲ್ಲಿ ನಾನಾ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಎಚ್.ಕೆ.ಪಾಟೀಲರು ಪ್ರಬುದ್ಧ ರಾಜಕಾರಣಿ. ಅಂತಹ ನಾಯಕರ ವಿರುದ್ಧ ಹೊರಟ್ಟಿ ಸಣ್ಣತನದ ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಟಿ.ಈಶ್ವರ ಮಾತನಾಡಿ, ‘ಹೊರಟ್ಟಿ ಅವರ ಒಳ ಒಪ್ಪಂದ ಬಿಜೆಪಿಯ ಜಗದೀಶ ಶೆಟ್ಟರ, ಪ್ರಲ್ಹಾದ ಜೋಶಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಇದೆ. ಈ ವಿಚಾರ ಜೆಡಿಎಸ್ ವರಿಷ್ಠರಿಗೆ ಗೊತ್ತಿರುವುದರಿಂದಲೇ ಹೊರಟ್ಟಿ ಅವರನ್ನು ಮಂತ್ರಿಗಿರಿಯಿಂದ ದೂರವಿಟ್ಟಿದ್ದಾರೆ. ಪಾಟೀಲರ ವಿರುದ್ಧ ಮಾಡಿರುವ ಆರೋಪಕ್ಕೆ ಹೊರಟ್ಟಿ ನಾಲ್ಕು ದಿನಗಳಲ್ಲಿ ಕ್ಷಮೆ ಕೋರಬೇಕು. ಇಲ್ಲವೇ ಅವರ ರಾಜಕೀಯ ಒಳಒಪ್ಪಂದಗಳನ್ನು ನಾವು ಬಯಲಿಗೆಳೆಯುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.