ಲಕ್ಷ್ಮೇಶ್ವರ: ತಾಲ್ಲೂಕಿನಾದ್ಯಂತ ಅ.12 ರಿಂದ ಸುರಿಯುತ್ತಿರುವ ಮಳೆ ರೈತರಿಗೆ ಶಾಪವಾಗಿ ಪರಿಣಮಿಸಿದ್ದು ಈವರೆಗೆ 11.1 ಸೆಂ.ಮೀ ಮಳೆಯಾಗಿದೆ. ಸತತ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಬಹುತೇಕ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅದರಲ್ಲೂ ಶಿಗ್ಲಿ-ಒಡೆಯರಮಲ್ಲಾಪುರ, ಲಕ್ಷ್ಮೇಶ್ವರ -ದೊಡ್ಡೂರು ಮಧ್ಯ ಎರಡೂ ದೊಡ್ಡ ಹಳ್ಳಗಳು ತುಂಬಿ ಹರಿದಿದ್ದು ಗಂಟೆಗಳವರೆಗೆ ರಸ್ತೆ ಸಂಚಾರ ಬಂದ್ ಆಗಿ ಗ್ರಾಮಸ್ಥರು ಪರದಾಡುವಂತಾಯಿತು.
ಸೋಮವಾರ ಬೆಳಿಗ್ಗೆ ಶಿಗ್ಲಿ, ಒಡೆಯರಮಲ್ಲಾಪುರ ಭಾಗದಲ್ಲಿ ದೊಡ್ಡ ಮಳೆ ಸುರಿದ ಪರಿಣಾಮ ಹಳ್ಳ ಭರ್ತಿಯಾಗಿ ನೀರು ರಸ್ತೆ ಮೇಲೆ ಹರಿಯಿತು. ಹಳ್ಳದ ನೀರು ರಸ್ತೆ ಮೇಲೆ ಹರಿದಿದ್ದರಿಂದ ಕೆಲ ತಾಸು ಶಿಗ್ಲಿ ಮತ್ತು ಒಡೆಯರಮಲ್ಲಾಪುರ ನಡುವೆ ಸಂಪರ್ಕ ಬಂದ್ ಆಗಿತ್ತು.
ನಿರಂತರ ಮಳೆಯಿಂದಾಗಿ ಕೊಯ್ಲಿಗೆ ಬಂದಿದ್ದ ಹತ್ತಿ, ಕಂಠಿಶೇಂಗಾ, ಗೋವಿನಜೋಳ ಬೆಳೆಗಳು ತೇವಾಂಶ ಹೆಚ್ಚಾಗಿ ಕೊಳೆಯುತ್ತಿವೆ. ಗೋವಿನಜೋಳ ಹಾಗೂ ಹತ್ತಿ ಗಿಡದಲ್ಲಿಯೇ ಮೊಳಕೆ ಬರುತ್ತಿದ್ದು, ಕೈಗೆ ಬಂದ ತುತ್ತು ರೈತರ ಬಾಯಿಗೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಸತತ ಬೀಳುತ್ತಿರುವ ಜಿಟಿಜಿಟಿ ಮಳೆಗೆ ಮಣ್ಣಿನ ಮನೆಗಳು ಸೋರಲಾರಂಭಿಸಿದ್ದು ಮನೆಗಳನ್ನು ಉಳಿಸಿಕೊಳ್ಳಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಮನೆಗಳು ಸೋರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಹೊದಿಕೆಗಳ ಖರೀದಿ ಜೋರಾಗಿ ನಡೆದಿದೆ.
ಮೆಣಸಿನಕಾಯಿ ಹೊಲಗಳಲ್ಲಿ ಮಳೆ ನೀರು ನಿಂತಿದ್ದು ಗಿಡಗಳು ಕೊಳೆಯುವ ಸ್ಥಿತಿಗೆ ಬಂದಿವೆ. ‘ಈ ವರ್ಷ ನಿರಂತರ ಸುರಿದ ಮಳೆ ಮುಂಗಾರು ಹಂಗಾಮಿನ ಹೆಸರು ಬೆಳೆಯನ್ನು ಬಲಿ ಪಡೆದಿತ್ತು. ಗೋವಿನಜೋಳವಾದರೂ ಚಲೋ ಬರುವ ನಿರೀಕ್ಷೆ ಇತ್ತು. ಆದರ ಈಗ ಸುರಿಯುತ್ತಿರುವ ಮಳೆ ಅದನ್ನೂ ಹಾಳು ಮಾಡುತ್ತಿದೆ’ ಎಂದು ರೈತರಾದ ಪ್ರಶಾಂತ ಉಮಚಗಿ, ಸೋಮಣ್ಣ ಬೆಟಗೇರಿ ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.