ADVERTISEMENT

ಹೇಮರಡ್ಡಿ ಮಲ್ಲಮ್ಮನವರ ಆದರ್ಶ ಇಂದಿಗೂ ಪ್ರಸ್ತುತ

ಕೊಣ್ಣೂರ ಹಿರೇಮಠದ ಸಿದ್ಧಲಿಂಗ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 12:46 IST
Last Updated 2 ಜೂನ್ 2023, 12:46 IST
ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ನಡೆದ ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಹಿರೇಮಠದ ಸಿದ್ದಲಿಂಗ ಶ್ರೀ ಹಾಗೂ ವಿರಕ್ತಮಠದ. ಡಾ‌‌.ಶಿವಕುಮಾರ ಶಿವಾಚಾರ್ಯ ಅವರನ್ನು ರಡ್ಡಿ ಸಮಾಜದಿಂದ ಸನ್ಮಾನಿಸಲಾಯಿತು.
ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ನಡೆದ ಹೇಮರಡ್ಡಿ ಮಲ್ಲಮ್ಮ ಹಾಗೂ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಹಿರೇಮಠದ ಸಿದ್ದಲಿಂಗ ಶ್ರೀ ಹಾಗೂ ವಿರಕ್ತಮಠದ. ಡಾ‌‌.ಶಿವಕುಮಾರ ಶಿವಾಚಾರ್ಯ ಅವರನ್ನು ರಡ್ಡಿ ಸಮಾಜದಿಂದ ಸನ್ಮಾನಿಸಲಾಯಿತು.   

ನರಗುಂದ: ‘ಹೇಮರಡ್ಡಿ ಮಲ್ಲಮ್ಮನವರು ನಿಜ ಭಕ್ತಿಗೆ ಹೆಸರುವಾಸಿಯಾಗಿದ್ದರು. ಸಂಸಾರದಲ್ಲಿ ಎಷ್ಟೇ ಕಷ್ಟ, ನೋವು ಬಂದರೂ ಸಹಿಸಿಕೊಂಡು ಎಲ್ಲ ಮಹಿಳೆಯರಿಗೆ ಪ್ರೇರಣೆಯಾಗಿದ್ದರು. ಇವರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ಕೊಣ್ಣೂರ ಹಿರೇಮಠದ ಸಿದ್ಧಲಿಂಗ ಶ್ರೀಗಳು ಹೇಳಿದರು.

ತಾಲ್ಲೂಕಿನ ಕೊಣ್ಣೂರು ಗ್ರಾಮದಲ್ಲಿ ರಡ್ಡಿ ಸಮಾಜದ ಆಶ್ರಯದಲ್ಲಿ ಗುರುವಾರ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ ಯಲ್ಲಿ ಮಾತನಾಡಿದರು.

‘ಅತ್ತೆ, ನಾದಿನಿಯರು ಕೊಟ್ಟ ಎಲ್ಲ ನೋವು, ಸಂಕಟ, ದುಃಖ–ದುಮ್ಮಾನಗಳನ್ನು ಸಹಿಸಿಕೊಂಡು ಸತ್ಯ, ಧರ್ಮ, ಕಾಯಕ ನಿಷ್ಠೆ, ತ್ಯಾಗ ಬಲಿದಾನಗಳಿಂದ ಚೆನ್ನಮಲ್ಲಿಕಾರ್ಜುನ ದೇವರಲ್ಲಿ ಮೋಕ್ಷ ಹೊಂದಿರುವುದು ಅವರ ಆದರ್ಶ ಭಕ್ತಿಗೆ ಸಾಕ್ಷಿ’ ಎಂದು ಅವರು ಹೇಳಿದರು.

ADVERTISEMENT

ವಿರಕ್ತಮಠದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಹೇಮರಡ್ಡಿ ಮಲ್ಲಮ್ಮನ ಪ್ರೇರಣೆ ಹಾಗೂ ಆದರ್ಶ ಸಿದ್ದಾಂತಗಳಿಗೆ ತಲೆ ಬಾಗಿ ಮೈದುನ ವೇಮನನು ಭೋಗ ಜೀವನ ತ್ಯಜಿಸಿ, ಸನ್ಯಾಸ ಸ್ವೀಕಾರ ಮಾಡಿ ಮಹಾಯೋಗಿ ಯಾಗಿದ್ದು ಅವಳ ಕರ್ತೃತ್ವ ಶಕ್ತಿಗೆ ಸಾಕ್ಷಿ’ ಎಂದರು.

ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನ ಆದರ್ಶ ಸಿದ್ಧಾಂತಗಳು ಕೇವಲ ರಡ್ಡಿ ಸಮುದಾಯಕ್ಕೆ ಸೀಮಿತವಾಗಿಲ್ಲ. ಅವಳ ಜೀವನ ಯಶೋಗಾಥೆ ಇಡೀ ಸ್ತ್ರೀ ಕುಲಕ್ಕೆ ಆದರ್ಶ’ ಎಂದರು.

ಹೇಮರೆಡ್ಡಿ ಮಲ್ಲಮ್ಮ ಹಾಗೂ ವೇಮನ ಜಯಂತಿ ಅಂಗವಾಗಿ ಅವರ ಭಾವಚಿತ್ರದ ಮೆರವಣಿಗೆ ಕುಂಭ, ಆರತಿಗಳೊಂದಿಗೆ ಕೊಣ್ಣೂರಿನ ರಾಜ ಬೀದಿಗಳಲ್ಲಿ ವಿಜೃಂಭಣೆಯಿಂದ ನೆರವೇರಿತು.

ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ನಿರ್ಮಾಣಕ್ಕಾಗಿ 4 ಗುಂಟೆ ಜಾಗ ನೀಡಿದ ಮಳಲಿ ಕುಟುಂಬದವರನ್ನು ಸನ್ಮಾನಿಸಲಾಯಿತು. ಎಸ್.ಬಿ. ಯಲ್ಲಪ್ಪಗೌಡರ, ಅಪ್ಪನಗೌಡ ಪಾಟೀಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.