ADVERTISEMENT

ರಿಟರ್ನ್ಸ್‌ ಸಲ್ಲಿಕೆಗೆ ಡಿ.31 ಕೊನೇ ದಿನ

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಕಾರ್ಯಾಗಾರ; ಬಿ.ಟಿ. ಮನೋಹರ ಸಲಹೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 17:20 IST
Last Updated 5 ಡಿಸೆಂಬರ್ 2018, 17:20 IST
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ನಡೆದ ಜಿಎಸ್‌ಟಿ ವಿಚಾರ ಸಂಕಿರಣವನ್ನು ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ ಬಿ.ಟಿ. ಮನೋಹರ ಉದ್ಘಾಟಿಸಿದರು. ಉದಯಶಂಕರ, ಪ್ರತಾಪಕುಮಾರ, ಡಾ.ರಶ್ಮಿರಾವ್, ಚಂದ್ರು ಲೋಕರೆ, ಶಿವಾನಂದ ಮುಗ್ದುಮ್ ಇದ್ದಾರೆ
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ನಡೆದ ಜಿಎಸ್‌ಟಿ ವಿಚಾರ ಸಂಕಿರಣವನ್ನು ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ ಬಿ.ಟಿ. ಮನೋಹರ ಉದ್ಘಾಟಿಸಿದರು. ಉದಯಶಂಕರ, ಪ್ರತಾಪಕುಮಾರ, ಡಾ.ರಶ್ಮಿರಾವ್, ಚಂದ್ರು ಲೋಕರೆ, ಶಿವಾನಂದ ಮುಗ್ದುಮ್ ಇದ್ದಾರೆ   

ಗದಗ: ‘ವ್ಯಾಪಾರಸ್ಥರು ಡಿ.31ರೊಳಗೆ ವಾರ್ಷಿಕ ರಿಟರ್ನ್ಸ್‌ ಸಲ್ಲಿಸದಿದ್ದರೆ ದಂಡ ಮತ್ತು ಬಡ್ಡಿ ಪಾವತಿಸಬೇಕಾಗಿ ಬರುತ್ತದೆ. ನಿಗದಿತ ಅವಧಿಯೊಳಗೆ ತೆರಿಗೆ ಲೆಕ್ಕ ಪತ್ರ ಸಲ್ಲಿಸಬೇಕು’ಎಂದು ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಂಸ್ಥೆಯ ತೆರಿಗೆ ಉಪಸಮಿತಿ ಅಧ್ಯಕ್ಷ ಬಿ.ಟಿ. ಮನೋಹರ ಹೇಳಿದರು.

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ನಡೆದ ಜಿಎಸ್‌ಟಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಎಸ್‌ಟಿ ಜಾರಿಯಾದ ನಂತರ, ಸಂಸ್ಥೆಯ ವತಿಯಿಂದ ಈವರೆಗೂ ವ್ಯಾಪಾರಸ್ಥರಿಗೆ ಹಾಗೂ ಉದ್ಯಮಿಗಳಿಗೆ ಮಾಹಿತಿ ಒದಗಿಸಲು 320ಕ್ಕೂ ಹೆಚ್ಚು ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿದೆ. 18 ತಿಂಗಳ ಕೂಸಾಗಿರುವ ಜಿಎಸ್‌ಟಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಸದ್ಯ ನಾವು ಜಿಎಸ್‌ಟಿಯಲ್ಲಿ ಕೊನೆಯ ಹಂತ ತಲುಪಿದ್ದೇವೆ. ಅಂದರೆ ಡಿ.31ರೊಳಗೆ ವಾರ್ಷಿಕ ಲೆಕ್ಕಪತ್ರ ವಿವರ ಸಲ್ಲಿಸಬೇಕು’ ಎಂದರು.

ADVERTISEMENT

‘ಜಿಎಸ್‌ಟಿ ಕುರಿತು ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ ಸಮಸ್ಯೆಗಳಿದ್ದರೆ, ಸ್ಥಳೀಯ ತೆರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.

‘ವ್ಯಾಪಾರಸ್ಥರು ಪಾರದರ್ಶಕವಾಗಿ ತೆರಿಗೆ ಪಾವತಿ ಮಾಡಿದರೆ, ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿ, ವ್ಯಾಪಾರ ವಹಿವಾಟನ್ನು ಸುಗಮವಾಗಿ ನಡೆಸಿಕೊಂಡು ಹೋಗಬೇಕು. ಈಗಾಗಲೇ ಜಿಎಸ್‌ಟಿಗೆ ಸಂಬಂಧಿಸಿದಂತೆ ಸಹಾಯವಾಣಿ ಆರಂಭಿಸಲಾಗಿದೆ. ದೂರವಾಣಿ ಕರೆ ಮಾಡಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು’ ಎಂದು ಧಾರವಾಡ ವಾಣಿಜ್ಯ ತೆರಿಗೆ ಇಲಾಖೆ (ಆಡಳಿತ) ಜಂಟಿ ಆಯುಕ್ತ ಉದಯಶಂಕರ ಹೇಳಿದರು.

ಹುಬ್ಬಳ್ಳಿ ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ವಿಭಾಗ ಎನ್‍ಪೋರ್ಸ್‌ಮೆಂಟ್ ಜಂಟಿ ಆಯುಕ್ತ ಪ್ರತಾಪಕುಮಾರ, ಡಾ.ರಶ್ಮಿರಾವ್, ಬೆಳಗಾವಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಚಂದ್ರು ಲೋಕರೆ, ಶಿವಾನಂದ ಮುಗ್ದುಮ್ ಜಿಎಸ್‌ಟಿ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ಸಂಸ್ಥೆ ಗೌರವ ಕಾರ್ಯದರ್ಶಿ ಮಧುಸೂದನ ಪುಣೇಕರ, ತೆರಿಗೆ ಉಪ ಸಮಿತಿ ಅಧ್ಯಕ್ಷ ವಿ.ಎಸ್.ಮಾಟಲದನ್ನಿ, ರಾಮನಗೌಡ ದಾನಪ್ಪಗೌಡ್ರ ಇದ್ದರು.

*
ಜಿಎಸ್‌ಟಿಯಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳು ಇವೆ. ಅವುಗಳನ್ನು ಸರಿಪಡಿಸಿ, ಸರಳೀಕರಣ ಮಾಡಿ ಉದ್ಯಮಿಗಳ ಹಿತ ಕಾಪಾಡಬೇಕು.
-ಮಲ್ಲಿಕಾರ್ಜುನ ಸುರಕೋಡ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.