ADVERTISEMENT

ಸಂಭ್ರಮದ ಹಾಲಗೊಂಡ ಬಸವೇಶ್ವರ ರಥೋತ್ಸವ

ಜನಮನ ಸೆಳೆದ ಭಜನಾ ಸಂಘಗಳ ಶಿವ ಶರಣರ ಚಿತ್ರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 4:08 IST
Last Updated 19 ಆಗಸ್ಟ್ 2025, 4:08 IST
ಲಕ್ಕುಂಡಿ ಐತಿಹಾಸಿಕ ಹಾಲಗೊಂಡ ಬಸವೇಶ್ವರ ರಥೋತ್ಸವ ಸಾವಿರಾರು ಭಕ್ತರ ಮಧ್ಯೆ ಸಂಭ್ರಮದಿಂದ ಜರುಗಿತು
ಲಕ್ಕುಂಡಿ ಐತಿಹಾಸಿಕ ಹಾಲಗೊಂಡ ಬಸವೇಶ್ವರ ರಥೋತ್ಸವ ಸಾವಿರಾರು ಭಕ್ತರ ಮಧ್ಯೆ ಸಂಭ್ರಮದಿಂದ ಜರುಗಿತು   

ಲಕ್ಕುಂಡಿ: ಕಲ್ಯಾಣಿ ಚಾಲುಕ್ಯರಸರ ಕಾಲದಲ್ಲಿ ನಿರ್ಮಾಣವಾದ ಇಲ್ಲಿನ ಐತಿಹಾಸಿಕ ಹಾಲಗೊಂಡ ಬಸವೇಶ್ವರರ ಶತಮಾನದ ರಥೋತ್ಸವ ಶ್ರಾವಣದ ಕೊನೆ ಸೋಮವಾರ ಸಾವಿರಾರು ಭಕ್ತಾಧಿಗಳ ಮಧ್ಯೆ ಅದ್ದೂರಿಯಾಗಿ ಜರುಗಿತು.

ಬಜಾರ್‌ ರಸ್ತೆಯಲ್ಲಿ ಸಾಗಿದ ರಥೋತ್ಸವಕ್ಕೆ ಅಡ್ನೂರ ಬೃಹ್ಮನ್ಮಠದ ಶಿವಾಚಾರ್ಯರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ತೇರಿಗೆ ಉತ್ತತ್ತಿ ಎಸೆದು ಸಂಕಲ್ಪ ಸಮರ್ಪಿಸಿದರು. ರಥೋತ್ಸವದಲ್ಲಿ ಭಾಗಿಯಾದ ಕಲಾ ತಂಡದ ಡೊಳ್ಳು ಕುಣಿತ ಪ್ರದರ್ಶನ ಗಮನ ಸೆಳೆಯಿತು.

ADVERTISEMENT

ಆಕರ್ಷಿಸಿದ ಶರಣರ ಮೆರವಣಿಗೆ:

ಬಸವೇಶ್ವರರು, ಅಲ್ಲಮಪ್ರಭು, ಅಕ್ಕಮಹಾದೇವಿ, ಮರುಳ ಸಿದ್ದೇಶ್ವರರು, ಮಾರುತಿ, ಮಹಾಂತೇಶ್ವರ, ಮಲ್ಲಿಕಾರ್ಜುನ, ಲೆಕ್ಕದ ವೀರೇಶ್ವರ, ನಾಗಲಿಂಗೇಶ್ವರ, ಅನ್ನದಾನೀಶ್ವರರು, ಪಂಚಾಚಾರ್ಯರು ಸೇರಿದಂತೆ ನಾಡಿನ ಹಲವಾರು ಶಿವ ಶರಣರು ಭಾವಚಿತ್ರಗಳ ಮೆರವಣಿಗೆಯು ಮನ ಸೆಳೆಯಿತು.

ಗ್ರಾಮದ 11 ವಾರ್ಡ್‌ಗಳ 13 ಭಜನಾ ಕಲಾ ತಂಡಗಳು ತಮ್ಮ ಇಷ್ಟ ದೇವರ ಚಿತ್ರ ಮೆರವಣಿಗೆಯೊಂದಿಗೆ ತತ್ವ ಪದ, ಜಾನಪದ, ಸುಗ್ಗಿ ಪದ, ಭಕ್ತಿ ಪದಗಳನ್ನು ಹಾಡುತ್ತಾ ಪವಿತ್ರ ಶ್ರಾವಣ ಮಾಸದ ಕೊನೆ ಸೋಮವಾರವನ್ನು ಸಂಭ್ರಮಿಸಿದರು. ಗ್ರಾಮ ಪಂಚಾಯಿತಿಯು ಪ್ರತಿ ಭಜನಾ ಸಂಘಕ್ಕೆ ಸಂಪ್ರದಾಯದಂತೆ ಡಗ್ಗಾ ವಾದ್ಯ ಹಾಗೂ 10 ಕೆ.ಜಿ. ಬೆಲ್ಲವನ್ನು ಉಡುಗೊರೆಯಾಗಿ ನೀಡಿತು.

ಮೃತ್ಯುಂಜಯ ಹೋಮ:

ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನಪೂರ್ಣಿಶ್ವರಿ ಸತ್ಸಂಗ ಸಮಿತಿಯ ಆಶ್ರಯದಲ್ಲಿ ರಾಘವೇಂದ್ರ ಕೊಪ್ಪಳ ಗುರೂಜಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಹಾ ಮೃತ್ಯುಂಜಯ ಹೋಮ ನೆರವೇರಿತು.

ಅನ್ನಪೂರ್ಣಿಶ್ವರಿ ಪೂಜಾ, ಸತ್ಸಂಗದೊಂದಿಗೆ ಭಜನಾ ಕಾರ್ಯಕ್ರಮಗಳು ನೆರವೇರಿದವು. ಇದಕ್ಕೂ ಪೂರ್ವ ಬಸವೇಶ್ವರ ಮೂರ್ತಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ರುದ್ರಾಭೀಷೇಕ ನಡೆಯಿತು. ನಂತರ ಮಹಾ ಅನ್ನಸಂತರ್ಪಣೆ ನಡೆಯಿತು.

Quote - ಶತಮಾನ ಕಂಡ ಐತಿಹಾಸಿಕ ಹಾಲಗೊಂಡ ಬಸವೇಶ್ವರ ಜಾತ್ರೆಯಲ್ಲಿ ಸರ್ವ ಧರ್ಮದವರು ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ ಮಹೇಶ ಮುಸ್ಕಿನಭಾವಿ ಜಾತ್ರಾ ಕಮಿಟಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.