ಡಂಬಳ: ಹೋಬಳಿ ವ್ಯಾಪ್ತಿಯ ಹಿರೇವಡ್ಡಟ್ಟಿ ಮತ್ತು ನಾರಾಯಣಪೂರ ಗ್ರಾಮದ ಕಲ್ಲಪ್ಪನ ಕಣವಿ ಭಾಗದಲ್ಲಿ ಕಪ್ಪತ್ತಗುಡ್ಡದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ಈ ಪ್ರದೇಶದಲ್ಲಿ ಒಣಗಿ ನಿಂತಿದ್ದ ಬಾದೆ ಹುಲ್ಲು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
‘ಶನಿವಾರ ಬೆಳಿಗ್ಗೆ 11ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಸಂಜೆ 5ಗಂಟೆಯವರೆಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವುದರಲ್ಲಿ ನಿರತರಾಗಿದ್ದರು. ನಾರಯಣಪೂರ ಗ್ರಾಮದ ಕಲ್ಲಪ್ಪನ ಕಣವಿಯಿಂದ ಪ್ರಾರಂಭವಾದ ಬೆಂಕಿಯು ಡೋಣಿ ಭಾಗದ ಗುಡ್ಡದವರೆಗೆ ವ್ಯಾಪಿಸಿದೆ. ಅಂದಾಜು 50 ಹೆಕ್ಟೇರ್ಗೂ ಹೆಚ್ಚಿನ ಪ್ರದೇಶಕ್ಕೆ ಬೆಂಕಿ ಬಿದ್ದಿರಬಹುದು’ ಎಂದು ಹಿರೇವಡ್ಡಟ್ಟಿ ಗ್ರಾಮಸ್ಥರು ತಿಳಿಸಿದರು.
ಗುಡ್ಡಕ್ಕೆ ಬೆಂಕಿ ತಗುಲಿದ್ದರಿಂದ ದಟ್ಟವಾದ ಹೊಗೆ ಆವರಿಸಿತ್ತು. ವೇಗವಾಗಿ ಗಾಳಿ ಬೀಸುತ್ತಿದ್ದರಿಂದ ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಪರದಾಡಿದರು. ವಲಯ ಅರಣ್ಯಾಧಿಕಾರಿ ಎಸ್.ಎಂ ಶಿವರಾತ್ರೀಶ್ವರಸ್ವಾಮಿ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ6 ಗಂಟೆಗಳಿಗೂ ಹೆಚ್ಚು ಕಾಲ ಅವಿರತವಾಗಿ ಶ್ರಮಿಸಿದರು.
ಒಂದು ತಿಂಗಳ ಹಿಂದಷ್ಟೇ ಡಂಬಳ ಹೋಬಳಿ ವ್ಯಾಪ್ತಿಯ ಹಾರೂಗೇರಿ ಮತ್ತು ಹಿರೇವಡ್ಡಟ್ಟಿ ವ್ಯಾಪ್ತಿಯ ಕಪ್ಪತಗುಡ್ಡ ವನ್ಯಧಾಮದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಅಂದಾಜು 10 ಹೆಕ್ಟೇರ್ ಪ್ರದೇಶದಲ್ಲಿ ಒಣಗಿ ನಿಂತಿದ್ದ ಬಾದೆ ಹುಲ್ಲು ಸುಟ್ಟು ಭಸ್ಮವಾಗಿತ್ತು. ಈ ಗುಡ್ಡದಲ್ಲಿ ಸುಜ್ಲಾನ್ ಪವನ ವಿದ್ಯುತ್ ಕಂಪೆನಿಯ ವಿದ್ಯುತ್ ಕಂಬ ಇದ್ದು, ಶಾರ್ಟ್ ಸರ್ಕಿಟ್ನಿಂದ ಉಂಟಾದ ಕಿಡಿಯಿಂದ ಹುಲ್ಲಿಗೆ ಬೆಂಕಿ ಹತ್ತಿಕೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸತತ 5 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರು.
ಈ ಬಾರಿ ಬೆಂಕಿ ಹೇಗೆ ಹೊತ್ತಿಕೊಂಡಿದೆ ಎನ್ನುವುದರ ಕಾರಣ ತಿಳಿದುಬಂದಿಲ್ಲ. ಪ್ರತಿಕ್ರಿಯೆಗೆ ಅಧಿಕಾರಿಗಳು ಲಭ್ಯರಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.