ಗದಗ: ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಕ್ರಮವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾ ಘಟಕದ ಸದಸ್ಯರು ಸೋಮವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ವೇದಿಕೆಯ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಸ್. ಸೋಂಪುರ ನೇತೃತ್ವದಲ್ಲಿ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
‘ನಮ್ಮ ದೇಶದ ಸಂವಿಧಾನವು ಯಾವ ಭಾಷೆಯನ್ನೂ ರಾಷ್ಟ್ರಭಾಷೆ ಎಂದು ಕರೆಯದಿದ್ದರೂ; ಆಡಳಿತ ಭಾಷೆ ಎಂಬ ಹಿಂಬಾಗಿಲ ಮೂಲಕ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರುವ ನಿರಂತರ ಪ್ರಯತ್ನಗಳು ಸ್ವಾತಂತ್ರ್ಯ ಬಂದಾಗಿನಿಂದಲೂ ನಡೆಯುತ್ತ ಬಂದಿವೆ’ ಎಂದುಎಚ್.ಎಸ್. ಸೋಂಪುರ ಆರೋಪಿಸಿದರು.
‘ಭಾಷಾವಾರು ಪ್ರಾಂತಗಳ ಒಕ್ಕೂಟದಲ್ಲಿ ಎಲ್ಲ ಭಾಷೆಗಳನ್ನು ಕೈಬಿಟ್ಟು ಕೇವಲ ಹಿಂದಿ ಭಾಷೆಗೆ ಪ್ರೋತ್ಸಾಹ, ಮನ್ನಣೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಇಂತಹ ಕ್ರಮದಿಂದ ಭಾರತದ ಹಲವು ಭಾಷೆಗಳು ನಮ್ಮ ನೆಲದಲ್ಲೇ ತಬ್ಬಲಿಗಳಾಗುತ್ತಿವೆ. ಹಿಂದಿ ಭಾಷಿಕರ ಓಲೈಕೆಗಾಗಿ ಪ್ರಾದೇಶಿಕ ರಾಜ್ಯಗಳ ಮೇಲೆ ಒತ್ತಾಯಪೂರ್ವಕವಾಗಿ ಹಿಂದಿ ಹೇರುವ ದಮನಕಾರಿ ನೀತಿ ಖಂಡನೀಯ’ ಎಂದು ದೂರಿದರು.
‘ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಿಗೂ ಕೇಂದ್ರದ ಅಧಿಕೃತ ಸ್ಥಾನಮಾನ ಸಿಗುವಂತೆ ಭಾಷಾ ನೀತಿಗೆ ತಿದ್ದುಪಡಿ ತರಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಅಬ್ಬಿಗೇರಿ, ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ಶರಣಪ್ಪ ಪುರ್ತಗೇರಿ, ನಿಂಗಪ್ಪ ಹೊನ್ನಾಪೂರ, ನಿಂಗನಗೌಡ ಮಾಲಿಪಾಟೀಲ, ವೀರೇಶ ಹುರಕಡ್ಲಿ, ಗುರುರಾಜ ಮರಾಠೆ, ರಜಾಕ್ ಢಾಲಾಯತ್, ಪ್ರಕಾಶ ನೀರಲಗಿ, ಬಸವರಾಜ ವಡವಿ, ವಿರೂಪಾಕ್ಷ ಹಿತ್ತಲಮನಿ, ನಾಗೇಶ ಅಮರಾಪೂರ, ಆಶಾ ಜೂಲಗುಡ್ಡ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.