ಗದಗ: ಜಿಲ್ಲೆಯ ಎಲ್ಲ ಪ್ರಮುಖ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕಣಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಕರವೇ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಸ್.ಸೋಂಪುರ ಮಾತನಾಡಿ, ‘ಗದಗ ಜಿಲ್ಲೆ ಆಸ್ತಿತ್ವಕ್ಕೆ ಬಂದು 20 ವರ್ಷಗಳಾದವು. ಆದರೂ, ಜಿಲ್ಲೆಯ ಪ್ರಮುಖ ರಸ್ತೆಗಳ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು, ಅಧಿಕಾರಿಗಳು ಜಿಲ್ಲೆತ ರಸ್ತೆಗಳ ಅಭಿವೃದ್ಧಿ ಬಗ್ಗೆ ಕಿಂಚಿತ್ತು ಕೂಡ ಆಸಕ್ತಿ ವಹಿಸಿಲ್ಲ. ಇಲ್ಲಿನ ರಸ್ತೆಗಳನ್ನು ಶಾಶ್ವತವಾಗಿ ಅಭಿವೃದ್ಧಿಪಡಿಸಬೇಕು ಎಂದು ಕರವೇ ಸಾಕಷ್ಟು ಬಾರಿ ಮನವಿ ಮಾಡಿದರೂ ಈವರೆಗೆ ಪ್ರಯೋಜನ ಆಗಿಲ್ಲ’ ಎಂದು ಹೇಳಿದರು.
‘ಗದಗ- ಗಜೇಂದ್ರಗಡ, ರೋಣ- ಹೊಳೆಆಲೂರ, ಲಕ್ಷ್ಮೇಶ್ವರ- ಗದಗ, ಗದಗ- ನರಗುಂದ- ಚಿಕ್ಕನರಗುಂದ, ಮುಂಡರಗಿ-ಹೆಬ್ಬಾಳ, ಶಿರಹಟ್ಟಿ- ಗದಗ ರಸ್ತೆ ಸೇರಿದಂತೆ ಇನ್ನೂ ಅನೇಕ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಈ ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಡಾಂಬರೀಕರಣ ಮಾಡಬೇಕು. ಜಿಲ್ಲೆಯ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು’ ಎಂದು ಆಗ್ರಹಿಸಿದರು.
ಕರವೇ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿ ಮೂಲಕ ಗದಗ ಜಿಲ್ಲಾ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಮುಖಾಂತರ ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಎಸ್.ಗೋಡಿ, ಜಿಲ್ಲಾ ಉಪಾಧ್ಯಕ್ಷ ಶರಣಪ್ಪ ಪುರ್ತಗೇರಿ, ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಿಂಗನಗೌಡ ಮಾಲಿಪಾಟೀಲ, ಕರವೇ ಪ್ರಮುಖರಾದ ನೀಲನಗೌಡ ಪಾಟೀಲ, ಉಮೇಶ ಮೇಟಿ, ರಜಾಕ ಢಾಲಾಯತ, ಬಸವರಾಜ ಮೇಟಿ, ಬಸವರಾಜ ಹೊಗೆಸೊಪ್ಪಿ, ನಿಂಗಪ್ಪ ಹೊನ್ನಾಪೂರ ವಿರುಪಾಕ್ಷಿ ಹಿತ್ತಲಮನಿ, ಹನಮಂತ ಪೂಜಾರ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ಆಶು ಜೂಲಗುಡ್ಡ ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.