ಗದಗ:‘ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಮುಚ್ಚುವ ಸ್ಥಿತಿಗೆ ಬಂದಿದೆ.ನೇಕಾರರ ಮಜೂರಿಗಿಂತ ಅಧಿಕಾರಿಗಳ ವೇತನದ ಹೊರೆಯೇ ಹೆಚ್ಚಾಗಿದೆ. ಈ ನಿಗಮವನ್ನು ಸರ್ಕಾರ ನೇಕಾರರ ಕೈಗೆ ವಹಿಸಿದರೆ ಅದನ್ನು‘ಅಮೂಲ್ ಡೇರಿ ಮಾದರಿ’ಯಲ್ಲಿ ನಿರ್ವಹಣೆ ಮಾಡುತ್ತೇವೆ’ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕೈಮಗ್ಗದ ಬಟ್ಟೆಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಕೇರಳದಲ್ಲಿ ‘ನರೇಗಾ’ ಯೋಜನೆಯಡಿ ನೇಕಾರರ ಆರ್ಥಿಕ ಅಭಿವೃದ್ಧಿಗೆ ಅಲ್ಲಿನ ಸರ್ಕಾರ ಕ್ರಮ ವಹಿಸಿದೆ.ಆದರೆ, ರಾಜ್ಯದಲ್ಲಿ ನೇಕಾರರ ಸ್ಥಿತಿ ಗಂಭೀರವಾಗಿದೆ.ಕೈಮಗ್ಗ ನೇಕಾರರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ನೀಡಿದ್ದ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ’ಎಂದು ದೂರಿದರು.
‘ಕೈಮಗ್ಗ ಮತ್ತು ಕೃಷಿ ಉತ್ತರ ಕರ್ನಾಟಕದ ಎರಡು ಕಣ್ಣುಗಳಿದ್ದಂತೆ. ಇದನ್ನು ಬಲಪಡಿಸುವ ಮೂಲಕ ಮಾತ್ರ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯ.ಕೈಮಗ್ಗ ಉಳಿಯಬೇಕಾದರೆ, ಅದರ ಅಭಿವೃದ್ಧಿ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಸರ್ಕಾರ ನೇಕಾರರಿಗೇ ಬಿಟ್ಟು ಕೊಡಬೇಕು. ವಿಕೇಂದ್ರೀಕೃತ ಉತ್ಪಾದನೆ ಮತ್ತು ಕೇಂದ್ರೀಕೃತ ಮಾರುಕಟ್ಟೆ ವ್ಯವಸ್ಥೆಯನ್ನು ಅವಳಡಿಸಿಕೊಂಡಾಗ ಮಾತ್ರ ನೇಕಾರರ ಅಭಿವೃದ್ಧಿ ಸಾಧ್ಯ’ಎಂದರು.
ಸಹಿಷ್ಣುತೆಗಾಗಿ ಸಮ್ಮೇಳನ: ದಕ್ಷಿಣಾಯಣ ಮತ್ತು ಗ್ರಾಮ ಸೇವಾ ಸಂಘದ ಸಹಭಾಗಿತ್ವದಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸೆನೆಟ್ ಭವನದಲ್ಲಿ ಸೆ.2 ರಂದು ‘ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ' ಆಯೋಜಿಸಲಾಗಿದೆ.ಸಹಬಾಳ್ವೆ ಮತ್ತು ಸರಳ ಬದುಕಿನ ಕುರಿತು ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶ.ದೇಶದ ಖ್ಯಾತ ಬರಹಗಾರರು, ಸಾಹಿತಿಗಳು, ಚಲನಚಿತ್ರ ನಿರ್ದೇಶಕರು, ವಿಚಾರವಾದಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ’ಎಂದರು.
ಬಸವರಾಜ ಸೂಳಿಬಾವಿ, ಶಂಕರಗೌಡ ಸಾತ್ಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.