ADVERTISEMENT

ಧರ್ಮ ವಿಭಜನೆಗೆ ಕೈಹಾಕಿದವರಿಗೆ ಹಿನ್ನಡೆ: ಅನ್ನದಾನೀಶ್ವರ ಶ್ರೀ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 12:47 IST
Last Updated 10 ಡಿಸೆಂಬರ್ 2018, 12:47 IST
ಡಾ. ಅನ್ನದಾನೀಶ್ವರ ಸ್ವಾಮೀಜಿ
ಡಾ. ಅನ್ನದಾನೀಶ್ವರ ಸ್ವಾಮೀಜಿ   

ಮುಂಡರಗಿ: 'ರಾಜ್ಯ ಸರ್ಕಾರ ಸಲ್ಲಿಸಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸ್ಸು ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದೆ.ಇದರಿಂದ ತಮ್ಮ ಸ್ವಾರ್ಥಕ್ಕಾಗಿ ಧರ್ಮ ವಿಭಜನೆಗೆ ಕೈಹಾಕಿದವರಿಗೆ ಹಿನ್ನಡೆಯಾಗಿದೆ’ ಎಂದು ಮುಂಡರಗಿಯ ಡಾ. ಅನ್ನದಾನೀಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

‘ಲಿಂಗಾಯತವನ್ನು ಮಾತ್ರ ಪ್ರತ್ಯೇಕ ಧರ್ಮವಾಗಿ ಘೋಷಿಸಿ ಎಂದು ಕೇಂದ್ರದ ಮೇಲೆ ಒತ್ತಡ ಹೇರಿದ ಮುಖಂಡರಿಗಾಗಲಿ, ರಾಜ್ಯ ಸರ್ಕಾರಕ್ಕಾಗಲಿ ಯಾವುದೇ ಸ್ಪಷ್ಟ ಗುರಿ ಹಾಗೂ ಉದ್ದೇಶ ಇರಲಿಲ್ಲ. ಧರ್ಮ ವಿಭಜನೆಯಲ್ಲಿ ಕೆಲವೇ ಕೆಲವು ಜನರ ಸ್ವಾರ್ಥ ಇದ್ದಿದ್ದರಿಂದ ಅದಕ್ಕೆ ಜನರ ಬೆಂಬಲವೂ ದೊರೆಯಲಿಲ್ಲ' ಎಂದು ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತ್ತೀಚೆಗೆ ಸಚಿವ ಡಿ.ಕೆ.ಶಿವಕುಮಾರ ಅವರು‘ಸರ್ಕಾರ ಧರ್ಮ ವಿಭಜನೆಯ ಕೆಲಸಕ್ಕೆ ಕೈಹಾಕಿದ್ದು ತಪ್ಪು ನಿರ್ಧಾರ’ ಎಂದು ಒಪ್ಪಿಕೊಂಡಿದ್ದರು.ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಇದರಿಂದ ತೊಂದರೆ ಆಗಿದ್ದು ನಿಜ’ ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ ಇವರಿಬ್ಬರೂ ವೀರಶೈವ–ಲಿಂಗಾಯತ ಒಂದೇ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ' ಎಂದರು.

ADVERTISEMENT

ರಾಮ ಮಂದಿರ ನಿರ್ಮಾಣ ಆಗಲಿ

‘ರಾಮ ಹಿಂದೂಗಳ ಆದರ್ಶ ಪುರುಷನಾಗಿದ್ದಾನೆ. ಅಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ದೇಶದ ಸಂತರು, ಶರಣರು, ಜನರು ಒತ್ತಾಯಿಸುತ್ತಿದ್ದಾರೆ. ಬಹುಜನರ ಒತ್ತಾಸೆಗೆ ಮನ್ನಣೆ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯ ಆಗಿದೆ’ ಎಂದು ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.