ADVERTISEMENT

ಮಹದಾಯಿ: ಸೊಬರದಮಠಗೆ ಕೊಲೆ ಬೆದರಿಕೆ; ದೂರು

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 14:45 IST
Last Updated 25 ಜುಲೈ 2019, 14:45 IST
ವೀರೇಶ ಸೊಬರದಮಠ
ವೀರೇಶ ಸೊಬರದಮಠ   

ನರಗುಂದ: ನಾಲ್ಕು ವರ್ಷಗಳಿಂದ ಪಟ್ಟಣದಲ್ಲಿ ಮಹದಾಯಿ ಹೋರಾಟದ ನೇತೃತ್ವ ವಹಿಸಿರುವ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಗುರುವಾರ ಅವರು ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸೊಬರದಮಠ ಅವರು ತಮ್ಮ ಸ್ವಗ್ರಾಮ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ತೀರ್ಲಾಪೂರದಲ್ಲಿ ಇದ್ದಾಗ, ಬುಧವಾರ ರಾತ್ರಿ 9:36ಕ್ಕೆ ಅನಾಮಿಕ ಕರೆ ಬಂದಿದೆ. ಕರೆ ಸ್ವೀಕರಿಸಿದ ಸೊಬರಮಠ ಅವರಿಗೆ, ಕರೆ ಮಾಡಿದ ವ್ಯಕ್ತಿ, ‘ ಇನ್ನು ಎಂಟು ದಿನಗಳ ಒಳಗೆ ನಿಮ್ಮನ್ನು ಕೊಲೆ ಮಾಡುವುದಾಗಿ’ ಬೆದರಿಕೆ ಹಾಕಿದ್ದಾರೆ. ನೀನು ಎಲ್ಲಿ ಇದ್ದೀಯಾ, ನಾನೇ ಅಲ್ಲಿಗೆ ಬರುತ್ತೇನೆ’ ಎಂದಾಗ ಕರೆ ಸ್ಥಗಿತಗೊಳಿಸಿದ್ದಾರೆ. ಮರಳಿ ಅದೇ ಸಂಖ್ಯೆಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ. ಬೇರೊಂದು ಮೊಬೈಲ್‌ ಸಂಖ್ಯೆಯ ಮೂಲಕ ಕರೆ ಮಾಡಿದಾಗ, ಅದನ್ನು ಸ್ವೀಕರಿಸಿ,ನಾನು ನಿಮಗೆ ಸಿಗುವುದಿಲ್ಲ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ. ಮತ್ತೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ’ ಎಂದು ಸೊಬರದಮಠ ದೂರಿನಲ್ಲಿ ವಿವರಿಸಿದ್ದಾರೆ.

ಹಿಂದೆಯೂ ಜೀವಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಸೊಬರದಮಠ ಅವರು ಪೊಲೀಸ್‌ ಇಲಾಖೆಗೆ ಮನವಿ ಮಾಡಿಕೊಂಡಿದ್ದರು, ಹೀಗಾಗಿ ಅವರಿಗೆ ಗನ್‌ಮ್ಯಾನ್‌ ಭದ್ರತೆ ಒದಗಿಸಲಾಗಿದೆ.

ADVERTISEMENT

‘ನಾವು ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆಯೇ ಹೊರತು ಭಯೋತ್ಪಾದಕರಲ್ಲ. ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹೆಚ್ಚಿ, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸೊಬರದಮಠ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.