ಮುಂಡರಗಿ: ‘ಭಾರತವು ಎಲ್ಲ ರಂಗಗಳಲ್ಲೂ ಸ್ವಾವಲಂಬನೆ ಸಾಧಿಬೇಕೆಂಬ ಮಹತ್ವಾಂಕಾಕ್ಷೆ ಹೊಂದಿ ಆತ್ಮ ನಿರ್ಭರ ಭಾರತ ಯೋಜನೆಯನ್ನು ಜಾರಿಗೆ ತಂದಿದೆ. ಆರ್ಥಿಕವಾಗಿ, ವೈಜ್ಞಾನಿಕವಾಗಿ, ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಭಾರತ ಸ್ವಾವಲಂಬನೆ ಸಾಧಿಸಬೇಕು. ಆ ಮೂಲಕ ವಿಶ್ವಗುರುವಾಗಬೇಕು’ ಎಂದು ಸಮಾಜ ಸೇವಕ ಮಂಜುನಾಥ ಇಟಗಿ ತಿಳಿಸಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕವು ಬುಧವಾರ ಹಮ್ಮಿಕೊಂಡಿದ್ದ ಆತ್ಮ ನಿರ್ಭರ ಭಾರತ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆತ್ಮ ನಿರ್ಭರ ಭಾರತದಿಂದ ಭಾರತದಲ್ಲಿ ಉನ್ನತ ಮಟ್ಟದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, 21ನೇ ಶತಮಾನದ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳನ್ನು ಬಲಪಡಿಸುವುದು, ಭಾರತದ ಯುವಶಕ್ತಿಯನ್ನು ಬಳಸಿ ಸ್ವಾವಲಂಬಿಯಾಗುವ ಉದ್ದೇಶ ಹೊಂದಿದೆ’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಸಿ.ಎಸ್.ಅರಸನಾಳ ಮಾತನಾಡಿ, ‘ಸ್ವಾವಲಂಬಿ ಭಾರತ ಅಭಿಯಾನದ ಅಡಿ ಏಳು ಕ್ಷೇತ್ರಗಳಲ್ಲಿ ಸುಧಾರಣೆ ಹೊಂದಲು ಸಾಧ್ಯವಾಗುತ್ತದೆ. ಸ್ವಾವಲಂಬಿ ಭಾರತದ ಸಂಕಲ್ಪವನ್ನು ಸಾಬೀತುಪಡಿಸುವ ಸಲುವಾಗಿ ಭೂಮಿ, ಕಾರ್ಮಿಕ, ದ್ರವ್ಯ ಮತ್ತು ಕಾನೂನುಗಳೆಲ್ಲವನ್ನೂ ಆತ್ಮ ನಿರ್ಭರ ಭಾರತ ಪ್ಯಾಕೇಜ್ನಲ್ಲಿ ಒತ್ತಿಹೇಳಲಾಗಿದೆ’ ಎಂದು ತಿಳಿಸಿದರು.
ವಿದ್ಯಾರ್ಥಿ ಪರಶುರಾಮ ಮಲ್ಲಿಕೇರಿ ನಿರೂಪಿಸಿದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಎ.ಕೆ.ಮತ್ತೂರಮಠ, ಶಶಿಕಲಾ ಕೂಕನೂರ, ರಾಜಶೇಖರ ಹುಲ್ಯಾಳ, ಪೂಜಾ ಬೆಟಗೇರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.