ಗದಗ: ಆನ್ಲೈನ್ನಲ್ಲಿ ಔಷಧ ಮಾರಾಟಕ್ಕೆ ಅವಕಾಶ ನೀಡುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಶುಕ್ರವಾರ ಕರೆ ನೀಡಿದ್ದ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಜಿಲ್ಲೆಯಾದ್ಯಂತ ದಿನವಿಡೀ ಔಷಧ ಮಾರಾಟ ಅಂಗಡಿಗಳು ಬಾಗಿಲು ತೆರೆಯಲಿಲ್ಲ.ಆಸ್ಪತ್ರೆಗಳ ಆವರಣದಲ್ಲಿರುವ ಔಷಧ ಅಂಗಡಿಗಳು ತೆರೆದಿದ್ದವು. ಇಲ್ಲಿ ಗ್ರಾಹಕರ ದಟ್ಟಣೆ ಕಂಡುಬಂತು.
ಬಂದ್ ಕುರಿತು ಮಾಹಿತಿ ಇಲ್ಲದೆ ಅನೇಕರು, ಔಷಧ ಅಂಗಡಿಗಳ ಸಮೀಪ ಬಂದು,ನಂತರ ಬಾಗಿಲು ಹಾಕಿರುವುದನ್ನು ಕಂಡು ಮರಳಿದರು.ಕೆಲವರು ಜನೌಷಧಿ ಕೇಂದ್ರ ಮತ್ತು ಆಸ್ಪತ್ರೆ ಆವರಣದಲ್ಲಿರುವ ಅಂಗಡಿಗಳಿಂದಲೇ ಔಷಧ ಖರೀದಿಸಿದರು.
‘ಜಿಲ್ಲೆಯಲ್ಲಿ 440 ಔಷಧ ಮಾರಾಟ ಅಂಗಡಿಗಳಿದ್ದು, ಇದರಲ್ಲಿ 150 ಅಂಗಡಿಗಳು ಜಿಲ್ಲಾ ಕೇಂದ್ರವಾದ ಗದಗ ನಗರದಲ್ಲೇ ಇವೆ.ಆಸ್ಪತ್ರೆ ಆವರಣದಲ್ಲಿರುವ ಅಂಗಡಿಗಳನ್ನು ಹೊರತುಪಡಿಸಿ,ಇನ್ನುಳಿದ ಯಾವುದೇ ಅಂಗಡಿಗಳು ಬಾಗಿಲು ತೆರೆಯಲಿಲ್ಲ. ರೋಗಿಗಳಿಗೆ ಜೌಷಧಕ್ಕೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೆವು.ತುರ್ತು ಅಗತ್ಯ ಬಂದರೆ ಸಂಪರ್ಕಿಸಲು ಸಂಘದ ಸದಸ್ಯರ ಮೊಬೈಲ್ ಸಂಖ್ಯೆಯನ್ನೂ ನೀಡಿದ್ದೆವು’ ಎಂದು ಗದಗ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ವಿಶ್ವನಾಥ ವನಕಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆನ್ಲೈನ್ ಮೂಲಕ ಮತ್ತು ಬರಿಸುವ ಔಷಧಗಳು ಸುಲಭವಾಗಿ ಸಿಗುವ ಸಾಧ್ಯತೆ ಇರುವುದರಿಂದ ಇದರ ದುರುಪಯೋಗ ಸಾಧ್ಯತೆ ಹೆಚ್ಚು. ಸಾರ್ವಜನಿಕರಿಗೆ ವಿಶೇಷವಾಗಿ ಯುವಜನರಿಗೆ ಇದು ಪೂರಕವಾಗುವ ಬದಲು, ಮಾರಕವಾಗುವ ಸಂಭವವಿದೆ. ಇದಕ್ಕೆ ಅವಕಾಶ ಕೊಡಬಾರದು’ ಎಂದು ಆಗ್ರಹಿಸಿ ಸಂಘದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಗೌರವ ಕಾರ್ಯದರ್ಶಿ ಬಿ.ಮಂಜುನಾಥ ರೆಡ್ಡಿ, ಜ್ಞಾನೇಶ ಖೋಕಲೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.