ADVERTISEMENT

ಗದಗ| ಚುನಾವಣೆ ಬಳಿಕ ಸೌಹಾರ್ದ ಸಭೆ: ಹೋರಾಟಕ್ಕೆ ತಾತ್ಕಾಲಿಕ ವಿರಾಮ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 6:23 IST
Last Updated 21 ಅಕ್ಟೋಬರ್ 2020, 6:23 IST

ಗದಗ: ‘ಚುನಾವಣೆ ಬಳಿಕ ಬಳಗಾನೂರಿನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಸಮಾಜದ ಹಿರಿಯರೊಂದಿಗೆ ಸೌಹಾರ್ದ ಸಭೆ ನಡೆಸಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದ್ದರಿಂದ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ’ ಎಂದು ಹಾಲು ಮತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.

‘ನಮಗೆ ರಾಯಣ್ಣ ಬೇರೆಯಲ್ಲ; ರಾಣಿ ಚನ್ನಮ್ಮ ಬೇರೆಯಲ್ಲ. ಬಳಗಾನೂರಿನ ಸೂಕ್ತ ಸ್ಥಳದಲ್ಲಿ ರಾಣಿ ಚನ್ನಮ್ಮನ ಮೂರ್ತಿ ಸ್ಥಾಪನೆಗೆ ನಮ್ಮೆಲ್ಲರ ಬೆಂಬಲ ಇದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರಾಯಣ್ಣ ಮೂರ್ತಿ ಸ್ಥಾಪನೆಗೆ 2017ರಲ್ಲಿ ಗ್ರಾಮ ಪಂಚಾಯ್ತಿ ಠರಾವು ಪಾಸು ಮಾಡಿದೆ. 2019ರಲ್ಲಿ ಅನುಮತಿ ನೀಡಿದೆ. ತೆರವುಗೊಳಿಸಿದ್ದ ವೃತ್ತದಲ್ಲೇ ಮೂರ್ತಿ ಪ್ರತಿಷ್ಠಾಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದರೂ ಅವರು ವಿಳಂಬ ಧೋರಣೆ ತಾಳಿದ್ದರಿಂದ ಸಮಾಜದ ಯುವಕರು ಉದ್ವೇಗದಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ್ದರು’ ಎಂದು ಅವರು ಹೇಳಿದರು.

ADVERTISEMENT

ಬಳಗಾನೂರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶೇಖಣ್ಣ ಅಗಸಿಮನಿ ಮಾತನಾಡಿ, ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕುರಿತು ಸೋಮವಾರ ಗ್ರಾಮದಲ್ಲಿ ಶಾಂತಿ ಸಭೆ ನಡೆದಿದ್ದು, ಇದಕ್ಕೆ ಎಲ್ಲರೂ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿದರು.

ಯುವ ಮುಖಂಡ ರವಿ ದಂಡಿನ, ಹಾಲು ಮತ ಮಹಾಸಭಾದ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಲ್ಹಾದ ಹೊಸಳ್ಳಿ, ನಿರ್ದೇಶಕಿ ಚೆನ್ನಮ್ಮ ಹುಳಕಣ್ಣವರ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಶೇಖಣ್ಣ ಅಗಸಿಮನಿ, ರಾಘವೇಂದ್ರ ವಗ್ಗನವರ, ಸೋಮನಗೌಡ್ರ ಪಾಟೀಲ, ನಾಗಪ್ಪ ಅಣ್ಣಿಗೇರಿ, ಸುರೇಶ ಗುಲಗಂಜಿ, ಮಹೇಶ ಕೆರಕಲಮಟ್ಟಿ, ಮುತ್ತು ಜಡಿ, ಕುಮಾರ ಮಾರನಬಸರಿ, ಉಮೇಶ ಪೂಜಾರ, ಮುತ್ತು ಚೆಟ್ರಿ, ಮಂಜು ಜಡಿ, ರಮೇಶ ಕಂಬಳಿ, ಈರಪ್ಪ ತಾಳಿ, ಚಂದ್ರು ವಗ್ಗನವರ, ಬಸು ಚೆಟ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.