ನರೇಗಲ್: ‘ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ಶಾಂತತೆಯಿಂದ ಮೊಹರಂ ಹಬ್ಬ ಆಚರಿಸಬೇಕು’ ಎಂದು ರೋಣ ಸಿಪಿಐ ಎಸ್.ಎಸ್. ಬೀಳಗಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಅಂಗವಾಗಿ ಭಾನುವಾರ ಸಂಜೆ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು.
‘ಶಾಂತಿ ಸಭೆಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು ಖುಷಿ ನೀಡಿತು. ತ್ಯಾಗ ಪ್ರತೀಕವಾದ ಹಬ್ಬದಲ್ಲಿ ಭಕ್ತಿ ಇರಬೇಕು. ಅನ್ಯ ಧರ್ಮದ ಆಚರಣೆಗಳನ್ನು ಗೌರವದಿಂದ ಕಾಣಬೇಕು. ಸಮಾಜದಲ್ಲಿ ಶಾಂತಿ ಕಾಪಾಡಬೇಕು. ಸಾಮಾಜಿಕ ಜಾಲತಾಣದಲ್ಲಿ ಗಲಭೆ ನೀಡುವಂತೆ ಪೋಸ್ಟ್ ಹಾಕಿದರೆ ಕ್ರಮ ಜರುಗಿಸಲಾಗುವುದು’ ಎಂದರು.
ಪಿಎಸ್ಐ ಐಶ್ವರ್ಯ ನಾಗರಾಳ ಮಾತನಾಡಿ, ‘ಹಬ್ಬದಲ್ಲಿ ಪ್ರತಿ ಮಸೂತಿಯಿಂದ ಐದಾರು ಯುವಕರು ಜವಾಬ್ದಾರಿ ತೆಗೆದುಕೊಂಡು, ಘಟನೆಗಳ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗದೆ ದೇವರ ನಾಮಸ್ಮರಣೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು‘ ಎಂದರು.
ಈ ವೇಳೆ ಗ್ರಾಮದ ಹಿರಿಯ ಎಂ. ಎಸ್. ಧಡೆಸೂರಮಠ, ಎ. ಎ. ನವಲಗುಂದ, ಸೋಮಪ್ಪ ಹನಮಸಾಗರ, ಜಿ. ಎಂ. ನದಾಫ್, ಎಚ್. ಆರ್. ಕೊಪ್ಪಳ, ಕೆ. ಎಚ್. ಅಣ್ಣಿಗೇರಿ, ಖಾದರಬಾಷಾ ಹೂಲಗೇರಿ, ಮೌಲಾಸಾಬ್, ರಮೇಶ ಕೊಲಕಾರ, ಕೆ. ಎಸ್. ಗಡಾದ, ನಾಗರಾಜ ವಡ್ಡರ, ಸೀರಾಜ ಹೊಸಮನಿ, ಹಸನಸಾಬ ಕೊಪ್ಪಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.