ಚಂದ್ರಶೇಖರ್ ಭಜಂತ್ರಿ
ಮುಳಗುಂದ: ಪಟ್ಟಣದ ಹಳೇಹುಡ ಓಣಿಯ ದೇವಸ್ಥಾನದ ಶಕ್ತಿಪೀಠದಲ್ಲಿ ಪ್ರತಿಷ್ಠಾಪಿಸಿದ ಗ್ರಾಮದೇವತೆಯ ಟೋಪ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಆರಂಭವಾಗಿದ್ದು, ಚೌತ ಮನೆಗಳಿಗೆ ಭೇಟಿಕೊಟ್ಟು ಉಡಿ ತುಂಬುವ ಕಾರ್ಯ ನಡೆಸಲಾಯಿತು.
ಗ್ರಾಮದೇವತೆಯ ಟೋಪ ಜಾತ್ರೆ ಪಟ್ಟಣದಲ್ಲಿ ಕದಂಬರ ಕಾಲದಿಂದ ಆಚರಿಸಲಾಗುತ್ತಿದೆ ಎಂಬ ಪ್ರತೀತಿ ಹೊಂದಿದೆ. ಜಾತ್ರೆಯನ್ನು ಪ್ರತಿ 12 ವರ್ಷಗಳಿಗೊಮ್ಮೆ ಹಮ್ಮಿಕೊಳ್ಳಲಾಗುವುದು.
‘ಗ್ರಾಮದೇವತೆ ಜಾತ್ರೆಗೆ ಊರಿಗೆ ಊರೇ ನವವಧುವಿನಂತೆ ಸಿಂಗಾರಗೊಳ್ಳುತ್ತದೆ. ಮಾವಿನ ತಳಿರು, ಬೇವಿನ ಸೊಪ್ಪು, ತೆಂಗಿನ ಗರಿಗಳಿಂದ ಬೀದಿಗಳು ಸಿಂಗಾರಗೊಂಡಿವೆ. ಸರ್ವಧರ್ಮಿಯರ ಮನೆಗಳ ಅಂಗಳದಲ್ಲಿ ರಂಗೋಲಿ, ವಿದ್ಯುತ್ ದೀಪಗಳ ಅಲಂಕಾರದಿಂದ ಗ್ರಾಮವು ಕಂಗೊಳಿಸುತ್ತದೆ. ಜಾತ್ರೆಗೆ ಊರಿನ ಹೆಣ್ಣು ಮಕ್ಕಳನ್ನು ತವರಿಗೆ ಕರೆಯಿಸಿ ಉಡಿತುಂಬಿ ಸತ್ಕರಿಸುವುದು ಹಿಂದಿನಿಂದಲೂ ನಡೆದು ಬಂದ ಪದ್ದತಿಯಾಗಿದೆ. ಇದರ ಹಿಂದೆ ಬಾಂಧವ್ಯಗಳನ್ನ ಮತ್ತಷ್ಟು ಗಟ್ಟಿಗೊಳಸುವ ಉದ್ದೇಶವು ಅಡಗಿದೆ’ ಎಂದು ಹಿರಿಯರಾದ ಅಶೋಕ ಸೋನಗೋಜಿ ಹೇಳಿದರು.
ಹಿಂದಿನ ಕಾಲದಲ್ಲಿ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಾರಕ ರೋಗಗಳಿಂದ ಮುಕ್ತರಾಗಲು ಟೋಪ ಜಾತ್ರೆ ಆಚರಣೆಗೆ ಬಂದಿದೆ. ಗ್ರಾಮದೇವತೆ ಜನರನ್ನು ರಕ್ಷಿಸುವಳು ಎಂದು ಜನರು ನಂಬಿದ್ದಾರೆ. ಗ್ರಾಮದಲ್ಲಿ ದೇವಿ ಆರಾಧನೆ ಪ್ರಮುಖವಾಗಿದ್ದು, ಪ್ರತಿ ವರ್ಷವು ಮುಂಗಾರು ಮಳೆ ಆರಂಭದಲ್ಲಿ ಗ್ರಾಮದೇವತೆಗಳಿಗೆ ಉಡಿತುಂಬಿದ ನಂತರವೇ ಬೀಜ ಬಿತ್ತನೆ ಇಲ್ಲಿನ ಪದ್ದತಿ. ಹೀಗೆ ಮಾಡುವುದರಿಂದ ಬೆಳೆ ಸಮೃದ್ಧಿ ಮತ್ತು ಉತ್ತಮವಾಗಿ ಬರುತ್ತದೆ ಎಂಬುದು ಇಲ್ಲಿನ ರೈತರ ದೃಢ ನಂಬಿಕೆಯಾಗಿದೆ.
ಗ್ರಾಮದೇವಿಗೆ ಜಾತ್ರೆ ಸಂದರ್ಭದಲ್ಲಿ ಪ್ರಾಣಿ ಬಲಿ ಕೊಡುವುದು ಸಾಮಾನ್ಯ. ಆದರೆ, ಜಾತ್ರೆಗೆ ಪ್ರಾಣಿ ಬಲಿ ಸಂಪೂರ್ಣ ನಿಷೇಧವಿದೆ. ಜೊತೆಗೆ ಸ್ಥಳೀಯವಾಗಿ ಮಾಂಸ ಮಾರಾಟವು ಜಾತ್ರೆಯ 4 ದಿನ ನಿಷೇಧ ಮಾಡಲಾಗಿದೆ. ಜಾತ್ರೆಯು ಸಾತ್ವಿಕ, ಸಾಂಸ್ಕೃತಿಕ ಜಾತ್ರೆಯಾಗಿ ನಡೆಯುತ್ತಿದೆ.
ಪಟ್ಟಣವು ಸೌಹಾರ್ದಕ್ಕೆ ಹೆಸರುವಾಸಿ. ಜಾತ್ರೆಯಲ್ಲಿ ಸರ್ವಧರ್ಮಿಯರು ಶ್ರದ್ಧಾ ಭಕ್ತಿಯಿಂದ ಆಚರಣೆ ನಡೆಸಿಕೊಂಡು ಬಂದ ಇತಿಹಾಸವಿದೆ. ಜಾತ್ರೆಯ ಪ್ರತಿಯೊಂದು ಕೆಲಸದಲ್ಲೂ ಮುಸ್ಲಿಂ ಸಮುದಾಯ ಭಾಗವಹಿಸುವಿಕೆ ಸೌಹಾರ್ದಕ್ಕೆ ಸಾಕ್ಷಿಯಾಗಿದೆ.
ಧಾರ್ಮಿಕ ಇತಿಹಾಸ ಹೊಂದಿರುವ ಗ್ರಾಮದೇವತೆಯ ಜಾತ್ರೆ ವೈಭವ ಹಾಗೂ ವಿಶೇಷತೆಗಳಿಂದ ಕೂಡಿದ್ದು, ಮಂಗಳವಾರ ಬೆಳಿಗ್ಗೆ ಗ್ರಾಮದೇವತೆಯ ಉಡಿ ತುಂಬುವ ಮಂಗಳ ಕಾರ್ಯದ ಮೂಲಕ ಆರಂಭವಾಯಿತು. ಪದ್ದತಿಯಂತೆ ಚೌತ ಮನೆಗಳಾದ ಸುಂಕಾಪೂರ, ಕುಲಕರ್ಣಿ, ದೇಶಪಾಂಡೆ, ಹಕಾರಿ ಮತ್ತು ಉಡಚಗೊಣ್ಣವರ ಮನೆಗೆ ತೆರಳಿ ಉಡಿ ತುಂಬುವ ಕಾರ್ಯ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.