ADVERTISEMENT

ಮುಂಡರಗಿ | ಭತ್ತದ ಬೆಲೆ ಕುಸಿತ: ಕಂಗಾಲಾದ ರೈತ

ಕ್ವಿಂಟಲ್ ಭತ್ತ ₹1,300ರಿಂದ ₹1490ಕ್ಕೆ ಮಾರಾಟ: ಮಾಡಿದ ಖರ್ಚು ಸಿಗದ ಪರಿಸ್ಥಿತಿ

ಕಾಶಿನಾಥ ಬಿಳಿಮಗ್ಗದ
Published 19 ಮೇ 2025, 4:54 IST
Last Updated 19 ಮೇ 2025, 4:54 IST
<div class="paragraphs"><p>ಸಕಾಲದಲ್ಲಿ ಖರೀದಿದಾರರು ಬರದ ಕಾರಣ ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿ ಬದಿಯಲ್ಲಿ ರೈತರು ಹಾಕಿರುವ ಭತ್ತದ ರಾಶಿಗಳು</p></div>

ಸಕಾಲದಲ್ಲಿ ಖರೀದಿದಾರರು ಬರದ ಕಾರಣ ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿ ಬದಿಯಲ್ಲಿ ರೈತರು ಹಾಕಿರುವ ಭತ್ತದ ರಾಶಿಗಳು

   

ಮುಂಡರಗಿ: ತಾಲ್ಲೂಕಿನಾದ್ಯಂತ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ವಿವಿಧ ತಳಿಯ ಭತ್ತ ಬೆಳೆದಿದ್ದು, ಪ್ರಸ್ತುತ ಬೇಸಿಗೆ ಹಂಗಾಮಿನಲ್ಲಿ ಬೆಳೆದಿದ್ದ ಭತ್ತಕ್ಕೆ ಸೂಕ್ತ ಬೆಲೆ ದೊರೆಯದೆ ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನ ತುಂಗಭದ್ರಾ ನದಿ ದಂಡೆಯ ಮೇಲಿರುವ ಹೆಸರೂರು, ಕಕ್ಕೂರು, ಕೊರ್ಲಹಳ್ಳಿ, ಗಂಗಾಪುರ, ಶೀರನಹಳ್ಳಿ, ಶಿಂಗಟಾಲೂರ, ಹಮ್ಮಿಗಿ, ಗುಮ್ಮಗೋಳ, ಬಿದರಳ್ಳಿ ಮೊದಲಾದ ಗ್ರಾಮಗಳಲ್ಲಿ ರೈತರು ಅಪಾರ ಪ್ರಮಾಣದ ಭತ್ತ ಬೆಳೆದಿದ್ದಾರೆ. ಕಳೆದ ವರ್ಷ ಬೇಸಿಗೆಯಲ್ಲಿ ತುಂಗಭದ್ರಾ ನದಿ ಬತ್ತಿಹೋಗಿತ್ತು. ರೈತರು ನದಿ ನೀರನ್ನು ಪೈರಿಗೆ ಬಳಸದಂತೆ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತಗಳು ಸುತ್ತೋಲೆ ಹೊರಡಿಸಿದ್ದವು. ಆದರೆ, ಪ್ರಸ್ತುತ ಬೇಸಿಗೆಯಲ್ಲಿ ನದಿಯಲ್ಲಿ ಸಾಕಷ್ಟು ನೀರು ಹರಿದಿದ್ದರಿಂದ ಈ ವರ್ಷ ನೀರಿಗೂ ಕೊರತೆಯಾಗಿರಲಿಲ್ಲ. ನದಿಯಲ್ಲಿ ಸಾಕಷ್ಟು ನೀರು ಇದ್ದದ್ದರಿಂದ ರೈತರು ಸಮೃದ್ಧವಾಗಿ ಭತ್ತ ಬೆಳೆದು, ಸಾಕಷ್ಟು ಆದಾಯದ ನಿರೀಕ್ಷೆಯಲ್ಲಿದ್ದರು. ಆದರೆ ಈ ವರ್ಷ ಭತ್ತದ ಬೆಲೆ ಪಾತಾಳಕ್ಕಿಳಿದಿದ್ದು, ರೈತರು ಕಂಗಾಲಾಗಿದ್ದಾರೆ.

ADVERTISEMENT

ಪ್ರಸ್ತುತ ವರ್ಷ ಕ್ವಿಂಟಲ್ ಭತ್ತ ಕೇವಲ ₹1,300-₹1490ಕ್ಕೆ ಮಾರಾಟವಾಗುತ್ತಿದ್ದು, ರೈತರು ಹಾಕಿದ ಬಂಡವಾಳ ವಾಪಸ್‌ ಬರುತ್ತದೆಯೋ, ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ.

ಕಳೆದ ವರ್ಷ ಕ್ವಿಂಟಲ್ ಭತ್ತ ₹2 ಸಾವಿರದಿಂದ ₹2,200ವರೆಗೆ ಮಾರಾಟವಾಗಿತ್ತು. ಖರೀದಿದಾರರು, ಏಜೆಂಟರು ರೈತರ ಜಮೀನಿಗೆ ಬಂದು ಪೈಪೋಟಿಯಲ್ಲಿ ಭತ್ತ ಖರೀದಿಸುತ್ತಿದ್ದರು. ಖರೀದಿಸಿದ ತಕ್ಷಣ ಸ್ಥಳದಲ್ಲಿಯೇ ಹಣ ಪಾವತಿಸುತ್ತಿದ್ದರು. ಈ ವರ್ಷ ಪರಿಸ್ಥಿತಿ ಭಿನ್ನವಾಗಿದ್ದು, ರೈತರು ನಮ್ಮ ಭತ್ತ ಖರೀದಿಸಿ ಎಂದು ಖರೀದಿದಾರರು, ಏಜೆಂಟರಿಗೆ ದುಂಬಾಲು ಬೀಳುವಂತಾಗಿದೆ. ಕೆಲವು ರೈತರು ಭತ್ತದ ಕೊಯ್ಲು ಮಾಡಿ 15-20 ದಿನಗಳು ಗತಿಸಿದ್ದರೂ ಯಾರೂ ಖರೀದಿಗೆ ಬಂದಿಲ್ಲ.

ಭತ್ತ ನಾಟಿ, ಗೊಬ್ಬರ, ಕ್ರಿಮಿನಾಶಕ, ಕೂಲಿ ಕಾರ್ಮಿಕರ ವೇತನ ಮೊದಲಾದವು ಸೇರಿ ರೈತರು ಒಂದು ಎಕರೆಯಲ್ಲಿ ಭತ್ತ ಬೆಳೆಯಲು ₹35 ಸಾವಿರ ಖರ್ಚು ಮಾಡಿರುತ್ತಾರೆ. ಒಂದು ಎಕರೆ ಜಮೀನಿನಲ್ಲಿ ಸಾಮಾನ್ಯವಾಗಿ 40ರಿಂದ 45 ಚೀಲ (75 ಕೆ.ಜಿ.) ಭತ್ತ ಬೆಳೆಯಬಹುದಾಗಿದೆ. ಹೀಗಿರುವ ದರದಲ್ಲಿ ಖರ್ಚು, ವೆಚ್ಚಗಳನ್ನೆಲ್ಲ ಕಳೆದರೆ ಬಿಡಿಗಾಸು ಉಳಿಯದಂತಾಗುತ್ತದೆ ಎಂದು ರೈತರು ಅಲವತ್ತುಕೊಂಡಿದ್ದಾರೆ.

ಮುಂಡರಗಿ ತಾಲ್ಲೂಕಿನ ಗಂಗಾಪುರ ಗ್ರಾಮದ ಹೊರವಲಯದ ಡಾಂಬರು ರಸ್ತೆಯ ಮೇಲೆ ರೈತರು ಹಾಕಿರುವ ಭತ್ತದ ರಾಶಿ
ಈ ವರ್ಷ ಭತ್ತದ ಬೆಲೆ ತುಂಬಾ ಕಡಿಮೆಯಾಗಿದ್ದು ಭತ್ತ ಖರೀದಿಗೆ ಖರೀದಿದಾರರು ಮುಂದೆ ಬರುತ್ತಿಲ್ಲ. ಭತ್ತವನ್ನು ಸಂರಕ್ಷಿಸಿಕೊಳ್ಳುವುದು ರೈತರಿಗೆ ತುಂಬಾ ಕಷ್ಟವಾಗಿದೆ
ಬೂದೇಶ ರಡ್ಡೇರ ಶೀರನಹಳ್ಳಿ ರೈತ

ಭತ್ತ ಒಣಗಿಸುವ ಸವಾಲಿನ ಕೆಲಸ

ಭತ್ತ ಕೊಯ್ಲು ಮಾಡಲು ಈಗ ಯಂತ್ರಗಳು ಲಭ್ಯವಿದ್ದು ರೈತರು ಸುಲಭವಾಗಿ ಭತ್ತ ಕೊಯ್ಲು ಮಾಡುತ್ತಾರೆ. ಆದರೆ ಅವುಗಳನ್ನು ಒಣಗಿಸುವುದು ರೈತರಿಗೆ ಸವಾಲಿನ ಕೆಲಸವಾಗಿದೆ. ಕೊಯ್ಲು ಮಾಡಿದ ಭತ್ತವನ್ನು ಹತ್ತಿರದ ಡಾಂಬರು ರಸ್ತೆ ಬದಿಯಲ್ಲಿ ಹಾಕಿ ಅವುಗಳನ್ನು ಒಣಗಿಸಬೇಕು. ಆಗಾಗ ಮಳೆ ಬೀಳುತ್ತಲಿದ್ದು ಮಳೆ ಬರುವ ಪೂರ್ವದಲ್ಲಿ ಅವುಗಳನ್ನು ರಾಶಿ ಮಾಡಿ ಸಂರಕ್ಷಿಸಬೇಕು. ಇದಕ್ಕೆ ಸಾಕಷ್ಟು ಕೂಲಿ ಕಾರ್ಮಿಕರ ಅಗತ್ಯವಿದ್ದು ನಿತ್ಯ ರೈತರು ಸಾವಿರಾರು ರೂಪಾಯಿಗಳನ್ನು ಭತ್ತ ಒಣಗಿಸಲು ವ್ಯಯಿಸಬೇಕಾಗುತ್ತದೆ. ಹೋದಷ್ಟಕ್ಕೆ ಹೋಗಲಿ ಎಂದರೆ ಸಕಾಲದಲ್ಲಿ ಖರೀದಿದಾರರು ಬರುತ್ತಿಲ್ಲ. ಏನು ಮಾಡಬೇಕೆಂದು ತೋಚದೆ ರೈತರು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.