ಗದಗ ತಾಲ್ಲೂಕಿನ ನಾಗಾವಿ ಗ್ರಾಮದಲ್ಲಿ ಮುಸ್ಲಿಂ ಕುಟುಂಬದ ಹಿರಿಯರಾದ ಪೀರ್ಸಾಬ ಪೀರ್ಖಾನ್ ಅವರು ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರಿಗೆ ಪ್ರಥಮ ತುಲಾಭಾರ ನೆರವೇರಿಸಿದರು
ಗದಗ: ‘ಆಧುನಿಕ ಸಮಾಜದಲ್ಲಿ ಪತಿ ಹಾಗೂ ಪತ್ನಿ ಒಬ್ಬರಿಗೊಬ್ಬರು ಅರಿತು ನಡೆದರೆ ಬಾಳು ಬಂಗಾರವಾಗುತ್ತದೆ’ ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.
ತಾಲ್ಲೂಕಿನ ನಾಗಾವಿ ಗ್ರಾಮದಲ್ಲಿ ನಡೆದ ಶರಣ ಬಸವೇಶ್ವರ ಪುರಾಣ ಕಾರ್ಯಕ್ರಮ ಮಂಗಲೋತ್ಸವ, ಸರ್ವಧರ್ಮಗಳ ಸಾಮೂಹಿಕ ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ವೀರೇಶ್ವರ ಪುಣ್ಯಾಶ್ರಮದ ಹಿಂದಿನ ಗುರುಗಳಾದ ಪಂ.ಪುಟ್ಟರಾಜ ಕವಿ ಗವಾಯಿಗಳವರ ಕಾಲದಿಂದಲೂ ನಾಗಾವಿ ಗ್ರಾಮವನ್ನು ತಮ್ಮ ತವರುಮನೆ ಎಂದೇ ಭಾವಿಸಿ ಪ್ರತಿವರ್ಷ ಗ್ರಾಮದ ಜನತೆಗೆ ಆಶೀರ್ವಾದ ನೀಡುತ್ತಿದ್ದರು. ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ತಮ್ಮನ್ನು ನಾಗಾವಿ ಗ್ರಾಮಕ್ಕೆ ಆಹ್ವಾನಿಸುತ್ತಿರುವುದು ಸಂತಸದ ವಿಷಯ. ಮುಸ್ಲಿಂ ಸಮಾಜದ ಪೀರ್ಸಾಬ ದಾವಲಸಾಬ ಪೀರ್ಖಾನ್ ಅವರು ತಮಗೆ ತುಲಾಭಾರ ನೆರವೇರಿಸುವ ಮೂಲಕ ಭಾವೈಕ್ಯತೆಗೆ ಶ್ರೀಕಾರ ಹಾಕಿದ್ದಾರೆ’ ಎಂದು ಹೇಳಿದರು.
ಪುರಾಣ ಸಮಿತಿ ಮುಖ್ಯಸ್ಥ ಬಸವಣ್ಣೆಪ್ಪ ಚಿಂಚಲಿ ಮಾತನಾಡಿ, ‘ಜಾತಿ, ಪಂಥಗಳ ಭೇದಭಾವ ಇಲ್ಲದೇ ಗ್ರಾಮಸ್ಥರೆಲ್ಲ ಒಂದುಗೂಡಿ, 44 ವರ್ಷಗಳಿಂದ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಹಾಗೂ 14 ವರ್ಷಗಳಿಂದ ಜಾತ್ರಾ ಮಹೋತ್ಸವ ನಡೆಸಿಕೊಂಡು ಬರಲಾಗುತ್ತಿದೆ’ ಎಂದು ಹೇಳಿದರು.
ಶರಣಬಸವೇಶ್ವರ ಪುರಾಣ ಪಠಣವನ್ನು ಗ್ರಾಮದ ಗಂಗಾಧರೇಶ್ವರ ಮಠದ ಮೃತ್ಯುಂಜಯಸ್ವಾಮಿ ಹಿರೇಮಠ, ಪುರಾಣ ಪ್ರವಚನವನ್ನು ಮಂಜಯ್ಯಸ್ವಾಮಿ ಹಿರೇಹಾಳ ನೆರವೇರಿಸಿದರು.
ಸಂಗೀತ ಸೇವೆ ನೀಡಿದ ಬಿ.ಎಸ್. ಹೊಂಬಳ ಹಾಗೂ ರಾಜಶೇಖರ ಸಂಗಳಕರ, ಕನ್ನೂರಬಸವಣ್ಣ ದೇವರಿಗೆ ನಿತ್ಯ ಅಭಿಷೇಕ ಸೇವೆ ನಡೆದ ಸಂತೋಷಸ್ವಾಮಿ ಹಿರೇಮಠ, ತುಲಾಭಾರ ಸೇವೆ ನಡೆಸಿದ ಪೀರ್ಖಾನ್ ಕುಟುಂಬದವರನ್ನು ಕಲ್ಲಯ್ಯಜ್ಜನವರು ಸನ್ಮಾನಿಸಿದರು.
ಶರಣಬಸವೇಶ್ವರ ಪುರಾಣ ಸಮಿತಿ, ಬಸವೇಶ್ವರ ಭಜನಾ ಸಂಘ, ಗಂಗಾಧರೇಶ್ವರ ಯುವಕ ಮಂಡಳ, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಲ್ಲಪ್ಪ ಗೋಲಪ್ಪನವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಳಿಕ ಅನ್ನ ದಾಸೋಹ ಜರುಗಿತು.
ಸಂಜೆ ಗ್ರಾಮದ ಸದ್ಭಕ್ತರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಸಂಭ್ರಮದಿಂದ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.