ನರಗುಂದ: ಮುಂಗಾರು ಮಳೆಯಿಂದಾಗಿ ಬೆಣ್ಣೆ ಹಳ್ಳ ತನ್ನ ರೌದ್ರ ನರ್ತನ ತೋರುವ ಮೂಲಕ ತಾಲ್ಲೂಕಿನ 7 ಹಳ್ಳಿಗಳ ಗ್ರಾಮಸ್ಥರನ್ನು ಗುರುವಾರ ಆತಂಕಕ್ಕೆ ದೂಡಿದೆ.
ಬುಧವಾರ ರಾತ್ರಿ ಹಾಗೂ ಗುರುವಾರ ಸಂಜೆ ಸುರಿದ ಮಳೆಯ ನೀರು ಮನೆ, ಶಾಲೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಇದರಿಂದಾಗಿ ಜನರು ಮನೆ ತೊರೆದು ನೆರೆಹೊರೆಯವರ ಮನೆಯಲ್ಲಿ ಬೀಡು ಬಿಡುವಂತಾಗಿದೆ.
ರಸ್ತೆ ಸಂಚಾರ ಬಂದ್: ಬೆಣ್ಣೆ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಯಾವಗಲ್ ಬಳಿಯ ಸೇತುವೆ ಮುಳುಗಿದೆ. ಇದರಿಂದ ನರಗುಂದ-ರೋಣ ಮಾರ್ಗ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ತಾಲ್ಲೂಕಿನ ಕುರ್ಲಗೇರಿ ಬಳಿ ಬೆಣ್ಣೆಹಳ್ಳ ಸೇತುವೆ ಮೇಲೆ ಹರಿಯುತ್ತಿರುವ ಕಾರಣ ನರಗುಂದ-ಗದಗ ಒಳಮಾರ್ಗ ಬಂದ್ ಆಗಿದೆ. ತಾಲ್ಲೂಕಿನ ಖಾನಾಪುರ ಬಳಿ ಬೆಣ್ಣೆಹಳ್ಳ ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವ ಕಾರಣ ಶಿರೋಳ-ಹದ್ಲಿ ರಸ್ತೆ ಸಂಚಾರ ಬಂದ್ ಆಗಿದೆ. ತಾಲ್ಲೂಕಿನ ಸುರಕೋಡ ಗ್ರಾಮದ ಬಳಿ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದ್ದು, ಗ್ರಾಮ ನಡುಗಡ್ಡೆಯಾಗಿ ಹೊರಗಿನ ಸಂಪರ್ಕ ಕಳೆದುಕೊಂಡಿದೆ.
ತಾಲ್ಲೂಕಿನ ಕುರ್ಲಗೇರಿಯಲ್ಲಿ ಪ್ರಾಥಮಿಕ ಶಾಲೆ ಹಾಗೂ ಮನೆಗಳಿಗೆ ಬೆಣ್ಣೆ ಹಳ್ಳದ ನೀರು ನುಗ್ಗಿ ಆತಂಕ ಸೃಷ್ಟಿಸಿದೆ.
7 ಗ್ರಾಮಗಳಿಗೆ ಆತಂಕ: ಬೆಣ್ಣೆ ಹಳ್ಳದ ಪ್ರವಾಹದಿಂದ ಸುರಕೋಡ, ಕುರ್ಲಗೇರಿ, ಗಂಗಾಪುರ, ಖಾನಾಪುರ, ಹದಲಿ, ಬನಹಟ್ಟಿ, ಮೂಗನೂರ ಗ್ರಾಮಗಳ ಜನರು ತೀವ್ರ ಆತಂಕಗೊಂಡಿದ್ದಾರೆ. ಕುರ್ಲಗೇರಿ, ಸುರಕೋಡ ಗ್ರಾಮಗಳು ಸ್ಥಳಾಂತರಗೊಂಡಿವೆ. ಆದರೆ, ಜನರು ಸಂಪೂರ್ಣ ಸ್ಥಳಾಂತರಗೊಳ್ಳದ ಪರಿಣಾಮ ಹಳ್ಳದ ಸಮೀಪವಿರುವ ಮನೆಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸುವಂತಾಗಿದೆ.
ಬೆಳೆ ಹಾನಿ: ರೈತರು ಮುಂಗಾರು ಬಿತ್ತನೆ ಮಾಡಿದ್ದು, ಬೆಣ್ಣೆ ಹಳ್ಳಕ್ಕೆ ಸಮೀಪವಿರುವ ಜಮೀನುಗಳಲ್ಲಿನ ಹೆಸರು, ಮೆಕ್ಕೆಜೋಳದ ಬೆಳೆ ಹಾನಿಯಾಗಿದೆ. ಒಟ್ಟಾರೆ 700 ಹೆಕ್ಟೇರ್ ಪ್ರದೇಶ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹಪೀಡಿತ ಗ್ರಾಮಗಳಿಗೆ ತಹಶೀಲ್ದಾರ್ ಶ್ರೀಶೈಲ ತಳವಾರ, ತಾಲ್ಲೂಕು ಪಂಚಾಯಿತಿ ಇಒ ಎಸ್.ಕೆ.ಇನಾಂದಾರ, ಬಿಇಒ ಗುರುನಾಥ ಹೂಗಾರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರೇಣುಕಾ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ, ಉಪವಿಭಾಗಾಧಿಕಾರಿ ಎಂ. ಗಂಗಪ್ಪ ಸುರಕೋಡ, ಕುರ್ಲಗೇರಿ ಗ್ರಾಮಗಳಿಗೆ ಭೇಟಿ ನೀಡಿ, ಪ್ರವಾಹದ ಪರಿಸ್ಥಿತಿ ಪರಿಶೀಲಿಸಿದರು.
ಜನರಿಗೆ ತೊಂದರೆಯಾಗದಂತೆ ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ದತೆ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ಜನರ ಸ್ಥಳಾಂತರಕ್ಕೆ ತುರ್ತು ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
‘ಎಲ್ಲೋ ಮಳೆಯಾದ ಪರಿಣಾಮ ಬೆಣ್ಣೆಹಳ್ಳದ ಪ್ರವಾಹ ಬಂದಿದೆ. ಇದು ನಮ್ಮನ್ನು ತೀವ್ರ ಕಷ್ಟಕ್ಕೆ ದೂಡಿದ್ದು, ಬೆಣ್ಣೆ ಹಳ್ಳದಿಂದ ತೊಂದರೆಯಾಗದಂತೆ ಶಾಶ್ವತ ಪರಿಹಾರದ ಅಗತ್ಯವಿದೆ’ ಎಂದು ಕುರ್ಲಗೇರಿ ಗ್ರಾಮ ನಿವಾಸಿ ಯಲ್ಲಪ್ಪ ಚಲುವಣ್ಣವರ ತಿಳಿಸಿದರು.
ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಲಾಗಿದ್ದು ಯಾವುದೇ ಹಾನಿಯಾಗಿಲ್ಲ. ಪ್ರವಾಹ ಪೀಡಿತ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲಶ್ರೀಶೈಲ ತಳವಾರ ನರಗುಂದ ತಹಶೀಲ್ದಾರ್
ಬೆಣ್ಣೆ ಹಳ್ಳದ ಪ್ರವಾಹದಿಂದ ಅಂದಾಜು 700 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಕುರಿತು ನಂತರ ಸಮೀಕ್ಷೆ ಮಾಡಲಾಗುವುದುಮಂಜುನಾಥ್ ಜನಮಟ್ಟಿ ಕೃಷಿ ಸಹಾಯಕ ನಿರ್ದೇಶಕ ನರಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.