
ಲಕ್ಷ್ಮೇಶ್ವರ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಈಗಾಗಲೇ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಸಾಮಗ್ರಿ ವೆಚ್ಚ (ಮೆಟೇರಿಯಲ್ ಪೇಮೆಂಟ್) ಬಿಡುಗಡೆ ಆಗಿಲ್ಲ. ಇದರಿಂದಾಗಿ ಒಂದೂವರೆ ವರ್ಷದಿಂದ ನಡೆದಿರುವ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು ಗ್ರಾಮಸ್ಥರಿಗೆ ತೊಂದರೆ ಎದುರಾಗಿದೆ. ಇದರೊಂದಿಗೆ ಕುಶಲ ಕೂಲಿಕಾರರಿಗೂ ಹಣ ಬಿಡುಗಡೆ ಆಗದೆ ಯೋಜನೆಯಡಿ ದುಡಿದ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಯೋಜನೆ ಅಡಿ ರಸ್ತೆ, ಚರಂಡಿ, ಶಾಲಾ ಮೈದಾನ, ಅಡುಗೆ ಕೋಣೆ, ಗ್ರಾಮ ಪಂಚಾಯಿತಿ ನೂತನ ಕಟ್ಟಡಗಳು, ಶಾಲಾ ಶೌಚಾಲಯ ಮತ್ತು ಶಾಲಾ ಕಾಂಪೌಂಡ್ ನಿರ್ಮಾಣ ಕಾಮಗಾರಿಗಳು ಮತ್ತು ವೈಯಕ್ತಿಕ ಕಾಮಗಾರಿಗಳು ಅಂದರೆ ದನದ ದೊಡ್ಡಿ, ಕೃಷಿಹೊಂಡ, ಕುರಿ ಶೆಡ್, ಎಳೆಹುಳು ತೊಟ್ಟಿಗಳ ನಿರ್ಮಾಣ ಕಾಮಗಾರಿಗಳು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿವೆ. ಶೇ 80ರಷ್ಟು ಸಾಮಗ್ರಿ ವೆಚ್ಚ ಶೇ 20ರಷ್ಟು ಕೂಲಿ ಪಾವತಿ ಅನುಪಾತದಡಿ ಈ ಕಾಮಗಾರಿಗಳು ನಡೆಯುತ್ತವೆ.
ಅದರಂತೆ ಯೋಜನೆಯಡಿ ಈಗಾಗಲೇ ತಾಲ್ಲೂಕಿನ 14 ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಆದರೆ, 14-15 ತಿಂಗಳಾದರೂ ಇನ್ನೂ ಸಾಮಗ್ರಿ ವೆಚ್ಚ ಮತ್ತು ಕುಶಲ (ಸ್ಕಿಲ್) ಕೂಲಿ ಹಣ ಬಿಡುಗಡೆ ಆಗಿಲ್ಲ. ಇದರಿಂದಾಗಿ ಕೆಲಸದ ಗುತ್ತಿಗೆ ಹಿಡಿದಿರುವ ಗುತ್ತಿಗೆದಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.
ತಾಲ್ಲೂಕಿನ ಶಾಲೆಗಳಲ್ಲಿ ಅಡುಗೆ ಕೋಣೆ, ಶಾಲಾ ಮೈದಾನ, ಶೌಚಾಲಯಗಳಂಥ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇದರಿಂದಾಗಿ ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. 2025-26ನೇ ಸಾಲಿನಲ್ಲಿ ಒಟ್ಟು ₹2.98 ಕೋಟಿ ಸಾಮಗ್ರಿ ವೆಚ್ಚ ಮತ್ತು ಕುಶಲ ಕೂಲಿಕಾರರ ಹಣ ಬಿಡುಗಡೆ ಬಾಕಿ ಇದ್ದು ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಕೆಲಸದ ಹಣ ಬಿಡುಗಡೆ ಆಗದೇ ತೊಂದರೆಗೆ ಸಿಲುಕಿದ್ದಾರೆ.
‘ಸಾಮಗ್ರಿ ವೆಚ್ಚ ಬಿಡುಗಡೆ ಆಗದೇ ಇರುವುದರಿಂದ ಸಾಕಷ್ಟು ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಸರಿಯಾಗಿ ಹಣ ಬಿಡುಗಡೆ ಆಗದೇ ಇರುವುದರಿಂದ ಕಾಮಗಾರಿ ಮಾಡಲು ಗುತ್ತಿಗೆದಾರರು ನಿರಾಸಕ್ತಿ ತೋರಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮಗಳ ಅಭಿವೃದ್ಧಿ ಕುಂಠಿತ ಆಗುತ್ತಿದೆ. ಕಾರಣ ಸರ್ಕಾರ ಆದಷ್ಟು ಬೇಗನೇ ಸಾಮಗ್ರಿ ವೆಚ್ಚ ಬಿಡುಗಡೆ ಮಾಡಬೇಕು’ ಎಂದು ದೊಡ್ಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಈಳಿಗೇರ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.