ಗಜೇಂದ್ರಗಡ: ‘ಗ್ರಾಮಗಳ ಉದ್ಧಾರವೇ ದೇಶದ ಉದ್ಧಾರವೆಂದು ಬಲವಾಗಿ ನಂಬಿದ್ದ ಮಹಾತ್ಮ ಗಾಂಧೀಜಿ ಅವರ ಕನಸನ್ನು ನನಸು ಮಾಡುವುದು ಎನ್ಎಸ್ಎಸ್ನ ಪ್ರಮುಖ ಗುರಿಯಾಗಿದೆ. ಈ ದಿಸೆಯಲ್ಲಿ ಯುವಶಕ್ತಿ ಸ್ವಯಂ ಸ್ಫೂರ್ತಿಯಿಂದ ರಾಷ್ಟ್ರ ಸೇವೆಗೆ ಸಿದ್ಧರಾಗಬೇಕು’ ಎಂದು ಪ್ರಾಚಾರ್ಯ ಜಿ.ಬಿ.ಗುಡಿಮನಿ ಹೇಳಿದರು.
ಸಮೀಪದ ಉಣಚಗೇರಿ ಗ್ರಾಮದಲ್ಲಿ ಶನಿವಾರ ನಡೆದ ಪಟ್ಟಣದ ಎಸ್.ಎಂ.ಭೂಮರಡ್ಡಿ ಪಿಯು ಕಾಲೇಜಿನ ಎನ್ಎಸ್ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
‘ಸ್ವಯಂ ಸೇವಕರಿಗೆ ಈ ಏಳು ದಿನಗಳ ಶಿಬಿರ ಯಶಸ್ವಿ ಜೀವನಕ್ಕೆ ಅಡಿಪಾಯವಾಗಬೇಕು. ಅಲ್ಲದೆ ಗ್ರಾಮೀಣ ಭಾಗದ ಜನರು ಇಂತಹ ಮಹತ್ವದ ಯೋಜನೆಗಳಿಗೆ ಸಹಕಾರ ನೀಡುವುದರ ಜತೆಗೆ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು’ ಎಂದರು.
ಪೊಲೀಸ್ ಕಾನ್ಸ್ಟೆಬಲ್ ಮಂಜುನಾಥ ಮಾರನಬಸರಿ ಮಾತನಾಡಿ, ‘ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕಷ್ಟಪಟ್ಟು ಅಧ್ಯಯನಶೀಲರಾಗಿ ಸುಂದರ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಶಿಬಿರಾಧಿಕಾರಿಗಳನ್ನು ಸನ್ಮಾನಿಸಿ, ವಿದ್ಯಾರ್ಥಿಗಳಿಗೆ ಪುಸ್ತಕ ನೀಡಿ ಗೌರವಿಸಲಾಯಿತು.
ಎನ್ಎಸ್ಎಸ್ ಅಧಿಕಾರಿ ಎಸ್.ಎಸ್.ವಾಲಿಕಾರ, ಉಪನ್ಯಾಸಕರಾದ ಅರವಿಂದ ವಡ್ಡರ, ಜೆ.ಎಸ್.ಗದಗ, ವೈ.ಆರ್.ಸಕ್ರೋಜಿ, ಎಂ.ಎಲ್.ಕ್ವಾಟಿ, ವಿಜಯಲಕ್ಷ್ಮಿ ಗಾಳಿ, ರವಿ ಹಲಗಿ, ಗ್ರಾಮಸ್ಥರಾದ ಶರಣಪ್ಪ ಹಿರೇಕೊಪ್ಪ, ಶರಣಪ್ಪ ಹುಡೇದ, ನಾಗಯ್ಯ ಹಿರೇಮಠ, ಉಮೇಶ ಧನ್ನೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.