ಗದಗ: ರೈತರಿಂದ ಖರೀದಿಸುವ ಉತ್ಪನ್ನಗಳಿಗೆ ವಿಧಿಸುವ ಸೆಸ್ ಕೈಬಿಡುವಂತೆ ಆಗ್ರಹಿಸಿ, ಜಿಲ್ಲೆಯಾದ್ಯಂತ ಸೋಮವಾರ ಎಪಿಎಂಸಿಗಳಲ್ಲಿ ವರ್ತಕರು ವಹಿವಾಟು ಸ್ಥಗಿತಗೊಳಿಸಿ, ಕಾರ್ಯದರ್ಶಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗದಗ ಎಪಿಎಂಸಿಯಲ್ಲಿ ಸೋಮವಾರ ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ. ಸೆಸ್ ತೆಗೆದುಹಾಕುವಂತೆ ಒತ್ತಾಯಿಸಿ ಗದಗ ಎಪಿಎಂಸಿ ದಲಾಲ ವರ್ತಕರ ಸಂಘದಿಂದ ಎಪಿಎಂಸಿ ಸಹ ಕಾರ್ಯದರ್ಶಿ ಸುಧಾ ಬಂಡಿ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಎಪಿಎಂಸಿ ಹೊರಗಡೆ ಖರೀದಿ ಮಾಡಿದರೆ ಯಾವುದೇ ಶುಲ್ಕವಿಲ್ಲ, ಆದರೆ, ಎಪಿಎಂಸಿಯಲ್ಲಿ ಖರೀದಿ ಮಾಡಿದರೆ ಶುಲ್ಕವಿಧಿಸುವುದು ಯಾವ ನ್ಯಾಯ ಎಂದು ಸಂಘದ ಸದಸ್ಯರು ಪ್ರಶ್ನಿಸಿದರು.
ಖರೀದಿ ಸಂಪೂರ್ಣ ಸ್ಥಗಿತಗೊಂಡಿತ್ತು. ಆದರೆ, ಬಂದ್ ಕುರಿತು ಮಾಹಿತಿ ಇಲ್ಲದೆ, ಗ್ರಾಮೀಣ ಪ್ರದೇಶಗಳಿಂದ ಕೆಲವು ರೈತರು ಶೇಂಗಾವನ್ನು ಮಾರಾಟಕ್ಕಾಗಿ ಎಪಿಎಂಸಿಗೆ ತಂದಿದ್ದರು. ಉತ್ಪನ್ನವನ್ನು ವಾಪಸ್ ಊರಿಗೆ ತೆಗೆದುಕೊಂಡು ಹೋಗಲಾಗದೆ ತೊಂದರೆಗೆ ಸಿಲುಕಿದ್ದ ರೈತರಿಗೆ, ವರ್ತಕರು ತಮ್ಮ ಮಳಿಗೆಗಳಲ್ಲೇ ಸರಕುಗಳನ್ನು ಇಡಲು ಅವಕಾಶ ಮಾಡಿಕೊಟ್ಟರು.
ಮುಂಡರಗಿ, ರೋಣ, ಲಕ್ಷ್ಮೆಶ್ವರ ಎಪಿಎಂಸಿಗಳಲ್ಲಿ ವರ್ತಕರ ಸಂಘಗಳು ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿ, ಸೆಸ್ ಕೈಬಿಡಬೇಕು ಎಂದು ಒತ್ತಾಯಿಸಿದರು. ಮುಂಡರಗಿ ಎಪಿಎಂಸಿ ವರ್ತಕರು ಸೋಮವಾರ ವಹಿವಾಟು ಸ್ಥಗಿತಗೊಳಿಸಿ ಎಪಿಎಂಸಿ ಕಾರ್ಯದರ್ಶಿ ದೀಪಾ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಲಕ್ಷ್ಮೇಶ್ವರ ಎಪಿಎಂಸಿ ವರ್ತಕರ ಸಂಘದ ಸದಸ್ಯರು ಎಪಿಎಂಸಿ ಕಾರ್ಯದರ್ಶಿ ಎನ್.ಎ.ಲಕ್ಕುಂಡಿ ಅವರಿಗೆ ಮನವಿ ಸಲ್ಲಿಸಿದರು.
ಗದಗ ಎಪಿಎಂಸಿಯಲ್ಲಿ ಒಣಮೆಣಸಿನಕಾಯಿ ವಹಿವಾಟಿಗೆ ಇ–ಟೆಂಡರ್ ವ್ಯವಸ್ಥೆ ಜಾರಿಗೆ ಬಂದ ನಂತರ ಎಪಿಎಂಸಿ ಸೆಸ್ ಸಂಗ್ರಹದಲ್ಲೂ ದಾಖಲೆ ಏರಿಕೆಯಾಗಿತ್ತು. ಲಾಕ್ಡೌನ್ ಜಾರಿಯಾಗುವುದಕ್ಕಿಂತ ಮೊದಲು 5 ಇ–ಟೆಂಡರ್ಗಳು ನಡೆದಿದ್ದವು. ಇದರಿಂದ ಎಪಿಎಂಸಿಗೆ ₹22.44 ಲಕ್ಷ ಸೆಸ್ ಸಂಗ್ರಹವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.