ADVERTISEMENT

ಆರ್‌ಎಸ್‌ಎಸ್‌ ಟೀಕಿಸಿದರೆ ಪ್ರಚಾರಸಿಗಬಹುದೆಂಬ ಲೆಕ್ಕಾಚಾರ: ಈಶ್ವರಪ್ಪ ಲೇವಡಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 5:58 IST
Last Updated 10 ಅಕ್ಟೋಬರ್ 2021, 5:58 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಗದಗ: ‘ರಾಜ್ಯದ ಜನರು ಜೆಡಿಎಸ್ ಪಕ್ಷವನ್ನು ಮರೆಯುತ್ತಿದ್ದು, ಆರ್‌ಎಸ್‍ಎಸ್ ಟೀಕಿಸಿದರೆ ಮತ್ತೆ ಪ್ರಚಾರ ಸಿಗಬಹುದು ಎಂಬುದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೆಕ್ಕಾಚಾರ ಇರಬಹುದು’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದರು.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಆರ್‌ಎಸ್‍ಎಸ್‍ ಟೀಕೆಯೊಂದಿಗೆ ಮುಸ್ಲಿಂ ಸಮುದಾಯದರನ್ನೂ ಸಂತೃಪ್ತಿ ಪಡಿಸಿದಂತೆ ಆಗುತ್ತದೆ ಎನ್ನುವ ಭ್ರಮೆಯಲ್ಲಿ ಜೆಡಿಎಸ್‍ನವರಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಕಾಶ್ಮೀರ ಪಂಡಿತರ ಸಾವಿಗೆ ಆರ್‌ಎಸ್‍ಎಸ್ ಕಾರಣ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಇಷ್ಟು ಕೀಳುಮಟ್ಟದ ರಾಜಕಾರಣಕ್ಕೆ ಇಳಿಯುತ್ತಾರೆ ಎಂದುಕೊಂಡಿರಲಿಲ್ಲ. ಕುಮಾರಸ್ವಾಮಿ ಎಲ್ಲಿ; ಆರ್‌ಎಸ್‌ಎಸ್ ಎಲ್ಲಿ? ಆರ್‌ಎಸ್ಎಸ್‌ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆಯೇ ಇಲ್ಲ. ದೇವೇಗೌಡರ ಪ್ರಭಾವದಿಂದ ಆರ್‌ಎಸ್‍ಎಸ್‍ ಬೆಳೆಯುವ ಅವಶ್ಯಕತೆ ಇಲ್ಲ. ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಆನಂದವಾಗಿ ರಾಜಕಾರಣ ಮಾಡಲಿ’ ಎಂದು ಲೇವಡಿ ಮಾಡಿದರು.

ADVERTISEMENT

‘ಹಲವು ದಶಕಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಇಂಧನ ದರ ಜಾಸ್ತಿ ಮಾಡಿರಲಿಲ್ಲವೇ’ ಎಂದು ಪ್ರಶ್ನಿಸಿದ ಅವರು, ‘ತೈಲ ದರದಲ್ಲಿ ಏರಿಳಿತವಾಗುವುದು ಒಂದು ಪ್ರಕ್ರಿಯೆ. ಅದನ್ನು ನಿಯಂತ್ರಣ ಮಾಡುವ ಪ್ರಯತ್ನ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.