ADVERTISEMENT

ನೆಮ್ಮದಿಯ ಬದುಕಿಗೆ ಧರ್ಮ ಬೋಧನೆ ಅವಶ್ಯ

ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮಾಲಿಕೆ, ಧರ್ಮಸಭೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 16:13 IST
Last Updated 29 ಜೂನ್ 2025, 16:13 IST
ಗದಗ ನಗರದ ಗಾಣಿಗ ಭವನದಲ್ಲಿ ನಡೆದ 10 ದಿನಗಳ ‘ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನ ಮಾಲಿಕೆಯನ್ನು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಉದ್ಘಾಟಿಸಿದರು
ಗದಗ ನಗರದ ಗಾಣಿಗ ಭವನದಲ್ಲಿ ನಡೆದ 10 ದಿನಗಳ ‘ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನ ಮಾಲಿಕೆಯನ್ನು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಉದ್ಘಾಟಿಸಿದರು   

ಪ್ರಜಾವಾಣಿ ವಾರ್ತೆ

ಗದಗ: ‘ನೆಮ್ಮದಿಯ ಬದುಕು, ಮಾನವ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ಚಿಂತನೆಗಳು, ಧರ್ಮ ಬೋಧನೆಗಳು ಅವಶ್ಯಕ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.

ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀಮದ್ ಕಾಶೀ ನೂತನ ಜಗದ್ಗುರುಗಳ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ 10 ದಿನಗಳ ‘ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನಮಾಲಿಕೆ ಉದ್ಘಾಟಿಸಿ ಮಾತನಾಡಿದರು.

ADVERTISEMENT

‘ನೈತಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಜನತೆಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ. ಇಂದು ಮಾನವ ಮಾನವನಾಗಿ ಬದುಕಬೇಕು. ಅದಕ್ಕಾಗಿ ವೀರಶೈವ ಧರ್ಮವನ್ನು ಬೋಧಿಸುವ, ಸನ್ಮಾರ್ಗದಲ್ಲಿ ಮುನ್ನಡೆಸುವ ಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಪ್ರವಚನವನ್ನು ಆಲಿಸಬೇಕಿದೆ’ ಎಂದರು.

ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ, ‘ಗದಗ ಪರಿಸರದಲ್ಲಿ ಕಾಶೀ ಪೀಠದ ಹಿರಿಯ ಜಗದ್ಗುರು ಪ್ರತಿ ವರ್ಷ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ನಡೆಸಿದ ಪರಿಣಾಮವಾಗಿ ಧರ್ಮಜಾಗೃತಿ, ಆಧ್ಯಾತ್ಮಿಕ ಚಿಂತನೆಗಳು ಜನತೆಯನ್ನು ಸನ್ಮಾರ್ಗದಲ್ಲಿ ಮುನ್ನಡೆಸಿವೆ. ಈ ಪ್ರವಚನದೊಂದಿಗೆ ಭಗವದ್ಗೀತೆಯ ಪ್ರವಚನವೂ ನಡೆಯಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ಕಾಶೀ ಮಹಾಪೀಠದ ಕಾಶೀ ಜ್ಞಾನಸಿಂಹಾಸನಾಧೀಶ್ವರ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ‘ವೀರಶೈವ ಲಿಂಗಾಯತ ಧರ್ಮಕ್ಕೆ ಧರ್ಮ ಗ್ರಂಥವಾಗಿರುವ ಸಿದ್ಧಾಂತ ಶಿಖಾಮಣಿ ಸಾಧಕರನ್ನು ಸಾಧನೆಯ ಮಾರ್ಗಕ್ಕೆ, ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಸುವಂತದ್ದು’ ಎಂದರು.

ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖಂಡರಾದ ಶರಣಬಸಪ್ಪ ಗುಡಿಮನಿ, ಬಸವರಾಜ ಬಿಂಗಿ, ಶ್ರೀಕಾಂತ ಲಕ್ಕುಂಡಿ, ರಾಜು ಕುರಡಗಿ, ಮುರುಗೇಶ ಬಡ್ನಿ, ವೀರಣ್ಣ ಕರಬಿಷ್ಠಿ, ಫಕ್ಕೀರಪ್ಪ ಹೆಬಸೂರ, ಶಿವಾನಂದಯ್ಯ ಹಿರೇಮಠ, ಸಿ.ಕೆ.ಮಾಳಶೆಟ್ಟಿ, ಶಂಕರ ಹಾನಗಲ್ಲ, ಜಿ.ಎಸ್.ಗಡ್ಡದೇವರಮಠ, ಗುರಣ್ಣ ಬಳಗಾನೂರ, ಶ್ವೇತಾ ದಂಡಿನ, ವಿಜಯಲಕ್ಷ್ಮೀ ದಿಂಡೂರ ಅವರನ್ನು ಸನ್ಮಾನಿಸಲಾಯಿತು.

ಕಾಂಚನಮಾಲಾ ಬಾಳಿಹಳ್ಳಿಮಠ, ಶಿವಯೋಗಿ ತೆಗ್ಗಿನಮಠ, ಸಿ.ಜಿ.ಜಿನಗಾ, ಈಶ್ವರಪ್ಪ ಮುನವಳ್ಳಿ, ಬಸವರಾಜ ಹೆರಕಲ್, ಜಾಹ್ನವಿ ದೇಸಾಯಿ ಇದ್ದರು.

ಮಂಜುನಾಥ ಬೇಲೇರಿ ಸ್ವಾಗತಿಸಿದರು, ಚಂದ್ರು ಬಾಳಿಹಳ್ಳಿಮಠ ಸ್ವಾಗತಿಸಿದರು. ವಿ.ಕೆ.ಗುರುಮಠ ನಿರೂಪಿಸಿದರು.

Quote - ಗದಗ ಭಾಗದಲ್ಲಿ ಹಿಂದೂ ಮುಸ್ಲಿಂ ವೈಷ್ಣವ ಶೈವರು ಒಗ್ಗಟ್ಟಿನೊಂದಿಗೆ ಸದ್ಭಾವನೆಯಿಂದ ಜೀವನ ನಡೆಸುತ್ತಿದ್ದಾರೆ. ಹಿಂದೂ ಮುಸ್ಲಿಂ ಸಮುದಾಯಕ್ಕೆ ಒಂದೇ ಟ್ರಸ್ಟ್‌ ಇರುವುದು ಇದಕ್ಕೆ ಕಾರಣ ಡಿ.ಆರ್.ಪಾಟೀಲ ಮಾಜಿ ಶಾಸಕ

Quote - ದಾರ್ಶನಿಕರು ಧರ್ಮಗುರುಗಳು ಮಾನವ ಕಲ್ಯಾಣಕ್ಕಾಗಿ ನೀಡಿದ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಬದುಕು ನಡೆಸಲು ಈ ಪ್ರವಚನ ಮಾಲಿಕೆ ದಾರಿದೀಪವಾಗಿದೆ ಎಸ್‌.ವಿ.ಸಂಕನೂರ ವಿಧಾನ ಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.