ADVERTISEMENT

ಗದಗ: ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮಾಜಿ ಸೈನಿಕ ಮನವಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 11:11 IST
Last Updated 29 ಸೆಪ್ಟೆಂಬರ್ 2020, 11:11 IST
ಕುಟುಂಬದವರೊಂದಿಗೆ ಮಾಜಿ ಸೈನಿಕ ಈರಣ್ಣ ಬ.ಅಣ್ಣಿಗೇರಿ
ಕುಟುಂಬದವರೊಂದಿಗೆ ಮಾಜಿ ಸೈನಿಕ ಈರಣ್ಣ ಬ.ಅಣ್ಣಿಗೇರಿ   

ಗದಗ: ‘ಕುಟುಂಬ ಸಮೇತರಾಗಿ ದಯಾಮರಣ ಹೊಂದಲು ಅವಕಾಶ ಮಾಡಿಕೊಡಬೇಕು’ ಎಂದು ಕೋರಿ ಲಕ್ಷ್ಮೇಶ್ವರದ ಮಾಜಿ ಸೈನಿಕ ಈರಣ್ಣ ಬ.ಅಣ್ಣಿಗೇರಿ ಅವರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.

‘17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ, 2019ರಲ್ಲಿ ನಿವೃತ್ತನಾಗಿದ್ದೇನೆ. ಹುಟ್ಟೂರಾದ ಬಾಲೇಹೊಸೂರಿನಲ್ಲಿ ಸ್ವಂತ ಮನೆ ಇಲ್ಲದ ಕಾರಣ ಈ ಹಿಂದೆ ಲಕ್ಷ್ಮೇಶ್ವರದಲ್ಲಿ ಖರೀದಿಸಿದ ನಿವೇಶನದಲ್ಲಿ ಮನೆ ಕಟ್ಟಲು ಆರಂಭಿಸಿದ್ದೆ. ಆದರೆ, ಕೆಲವರು ದುರದ್ದೇಶದಿಂದ ಕಟ್ಟಡ ಕಾಮಗಾರಿ ನಡೆಸಲು ಅಡ್ಡಿಪಡಿಸುತ್ತಿದ್ದಾರೆ’ ಎಂದು ಅವರು ದೂರಿದ್ದಾರೆ.

‘ಸೈನ್ಯ ಸೇರಲು ಆಸಕ್ತಿ ಇರುವ ಗ್ರಾಮೀಣ ಭಾಗದ ಯುವಕರಿಗೆ ಮಾರ್ಗದರ್ಶನ ನೀಡಲು ಉಚಿತ ತರಬೇತಿ ಕೇಂದ್ರ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಲಕ್ಷ್ಮೇಶ್ವರದ ಈಶ್ವರ ನಗರದಲ್ಲಿ ಮನೆ ನಿರ್ಮಿಸುತ್ತಿದ್ದೇನೆ. ಕೆಲವರು ಸುಳ್ಳು ದೂರು ನೀಡಿ ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಮನೆಗೆ ಗೂಂಡಾಗಳನ್ನು ಕಳುಹಿಸಿ ಮಾನಸಿಕ ಕಿರುಕುಳ ಕೊಡುವುದರ ಜತೆಗೆ, ಜೀವ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಈರಣ್ಣ ಆರೋಪಿಸಿದ್ದಾರೆ.

ADVERTISEMENT

‘ನಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು. ಮುಂದಿನ ಹತ್ತು ದಿನಗಳ ಒಳಗಾಗಿ ನಮಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೆ ದಯಾಮರಣಕ್ಕೆ ಅವಕಾಶ ನೀಡುವವರೆಗೂ ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬ ಸಮೇತರಾಗಿ ಧರಣಿ ಕೂರುತ್ತೇವೆ’ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.