ADVERTISEMENT

ಗದಗ ಮಾರುಕಟ್ಟೆಯಲ್ಲಿ ಅಗ್ನಿ ದುರಂತ: ಸುಟ್ಟು ಕರಕಲಾದ ಮಳಿಗೆಗಳು

ಬೆಳಗಿನ ಜಾವ 5 ಗಂಟೆಗೆ ಘಟನೆ; ಶಾರ್ಟ್‌ ಸರ್ಕೀಟ್‌ನಿಂದ ಅವಘಡ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 3:59 IST
Last Updated 4 ಫೆಬ್ರುವರಿ 2020, 3:59 IST
ಸುಟ್ಟು ಕರಕಲಾದ ಮಳಿಗೆಗಳನ್ನು ಅಗ್ನಿಶಾಮಕ ಸಿಬ್ಬಂದಿ ಪರಿಶೀಲಿಸಿದರು
ಸುಟ್ಟು ಕರಕಲಾದ ಮಳಿಗೆಗಳನ್ನು ಅಗ್ನಿಶಾಮಕ ಸಿಬ್ಬಂದಿ ಪರಿಶೀಲಿಸಿದರು   
""

ಗದಗ: ಇಲ್ಲಿನ ತರಕಾರಿ ಮಾರುಕಟ್ಟೆಯಲ್ಲಿ (ಗ್ರೇನ್‌ ಮಾರುಕಟ್ಟೆ) ಮಂಗಳವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದಅಗ್ನಿ ಆಕಸ್ಮಿಕ ಸಂಭವಿಸಿದ್ದು, 30ಕ್ಕೂ ಹೆಚ್ಚು ತರಕಾರಿ ಮತ್ತು ಕಿರಾಣಿ ಮಳಿಗೆಗಳು ಸುಟ್ಟು ಕರಕಲಾಗಿವೆ.

ನಸುಕಿನ 5 ಗಂಟೆ ಸುಮಾರಿಗೆ ಒಮ್ಮಲೆ ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸಿತು. ಮಳಿಗೆಗಳಲ್ಲಿ, ಮಾರುಕಟ್ಟೆಯ ಒಳಗೆ ಮಲಗಿದ್ದ ಕೆಲವು ಕಾರ್ಮಿಕರು ಬೆಂಕಿಯ ಝಳದಿಂದ ಎಚ್ಚರಗೊಂಡು, ಭಯದಿಂದ ಕೂಗುತ್ತಾ ಹೊರಗೋಡಿ ಬಂದರು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ‘ಆದರೆ, ಅಷ್ಟರಲ್ಲಾಗಲೇ, ಒಂದಕ್ಕೊಂದು ಹೊಂದಿಕೊಂಡಿರುವ ಮಳಿಗೆಗಳು ಸುಟ್ಟು ಕರಕಲಾಗಿದ್ದವು. ಹಣ್ಣು, ತರಕಾರಿ,ಕಿರಾಣಿ ಸಾಮಗ್ರಿ, ಬಿತ್ತನೆ ಬೀಜಗಳು ಸೇರಿದಂತೆ ₹1 ಕೋಟಿಗೂ ಹೆಚ್ಚಿನ ಹಾನಿಯಾಗಿದೆ’ ಎಂದು ಜಿಲ್ಲಾ ಕಾಳುಕಡಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಾಷಾಸಾಬ್‌ ಹೇಳಿದರು.

‘ನಸುಕಿನಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಜಾವ 6 ಗಂಟೆಯ ನಂತರ ಮಾರುಕಟ್ಟೆಯಲ್ಲಿ ಈ ಅಗ್ನಿ ಆಕಸ್ಮಿಕ ಸಂಭವಿಸಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು. ಸದ್ಯ ಬೆಂಕಿ ನಂದಿಸಲಾಗಿದ್ದು, ಹಾನಿ ಪ್ರಮಾಣ ಇನ್ನಷ್ಟೇ ತಿಳಿಯಬೇಕಿದೆ’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.