ನರಗುಂದ: ತಾಲ್ಲೂಕಿನ ಕೊಣ್ಣೂರು ಬಳಿಯ ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ವ್ಯಾಪ್ತಿಯ ಮಲಪ್ರಭಾ ಹಳೆಸೇತುವೆ ಮೇಲಿನ ಪ್ರವಾಹಕ್ಕೆ ಭಾನುವಾರ ಕೊಚ್ಚಿಹೋಗಿದ್ದ ಕೊಣ್ಣೂರಿನ ರೈತ ವೆಂಕನಗೌಡ ಸಾಲಿಗೌಡ್ರ ಅವರ ಮೃತ ದೇಹ ಬುಧವಾರ ಸಂಜೆ ಪತ್ತೆಯಾಗಿದೆ.
ನಾಲ್ಕು ದಿನಗಳಿಂದ ಬಾದಾಮಿ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದ್ದರೂ ಅವರ ದೇಹ ಪತ್ತೆಯಾಗಿರಲಿಲ್ಲ. ಇದರಿಂದಾಗಿ ಕುಟುಂಬದವರೂ ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಕೊಣ್ಣೂರು ಗ್ರಾಮದ ಈಜುಗಾರರಾದ ಹಸನ್ಸಾಬ್ ನದಾಫ್, ಮೈಬುಸಾಬ್ ನದಾಫ್, ಸಯ್ಯದ್ ಸಾಬ ನದಾಫ್, ಶರೀಫ ಸಾಹೇಬ ನದಾಫ್ ಸೇರಿ ಬೂದಿಹಾಳ ಸಮೀಪದ ಹೊಳೆಯ ಪಕ್ಕ ಕಂಟಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಅವರ ಮೃತ ದೇಹವನ್ನು ಪತ್ತೆಹಚ್ಚಿದರು.
ಈ ಮಾಹಿತಿಯನ್ನು ಬಳಿಕ ಬಾದಾಮಿ ಅಗ್ನಿ ಶಾಮಕಕ್ಕೆ ತಿಳಿಸಲಾಯಿತು. ಅಗ್ನಿಶಾಮಕ ದಳದವರು ಬೋಟ್ ಮೂಲಕ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ತೆಗೆದುಕೊಂಡು ಬಂದಿದ್ದಾರೆ ಎಂದು ಮೃತ ರೈತನ ಸಹೋದರ ಸಂತೋಷ ಸಾಲಿಗೌಡ್ರ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.