ADVERTISEMENT

ಅಕಾಲಿಕ ಮಳೆ: ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:45 IST
Last Updated 24 ಫೆಬ್ರುವರಿ 2026, 6:45 IST
ಯಾವಗಲ್ ಗ್ರಾಮದ ರೈತರು ಮಳೆಯಿಂದಾಗಿ ಕಡಲೆ ಫಸಲನ್ನು ರಕ್ಷಿಸಿಕೊಂಡರು
ಯಾವಗಲ್ ಗ್ರಾಮದ ರೈತರು ಮಳೆಯಿಂದಾಗಿ ಕಡಲೆ ಫಸಲನ್ನು ರಕ್ಷಿಸಿಕೊಂಡರು   

ರೋಣ: ತಾಲ್ಲೂಕಿನ ಯಾವಗಲ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಮವಾರ ಸಂಜೆ ಸುರಿದ ಅಕಾಲಿಕ ಮಳೆಯಿಂದಾಗಿ ತಾಲ್ಲೂಕಿನ ರೈತರಲ್ಲಿ ಆತಂಕ ಮೂಡಿದೆ.

ತಾಲ್ಲೂಕಿನ ಇನ್ನೂ ಕೆಲವು ರೈತರು ಕಡಲೆ, ಜೋಳ, ಕುಸುಬೆ, ಗೋಧಿ ಒಕ್ಕಣೆ ಮಾಡಿಲ್ಲ ಮಳೆಯಿಂದಾಗಿ ರೈತರು ಬೆಳೆ ರಕ್ಷಣೆಗೆ ಪರದಾಡುವಂತಾಯಿತು. ಈಗಾಗಲೇ ರಾಶಿ ಮಾಡಿರುವ ರೈತರು ದನಕರುಗಳಿಗಾಗಿ ಹೊಟ್ಟು ಮೇವು ಸಂಗ್ರಹಿಸದೆ ಹೊಲದಲ್ಲಿಯೇ ಬಿಟ್ಟಿದ್ದು ತರಾತುರಿಯಲ್ಲಿ ಸಂಗ್ರಹಿಸಲು ಮುಂದಾದರು.

ಈಗಾಗಲೇ ಹಿಂಗಾರು ಹಂಗಾಮಿನಲ್ಲಿ ನಿರೀಕ್ಷಿಸಿದ ಪ್ರಮಾಣದಲ್ಲಿ ಮಳೆ ಸುರಿಯದೆ ತಾಲ್ಲೂಕಿನ ರೈತರು ನಷ್ಠ ಅನುಭವಿಸಿದ್ದರು. ಹವಾಮಾನ ವೈಪರೀತ್ಯದಿಂದ ಇಳುವರಿಯಲ್ಲಿ ಕಡಿಮೆ ಬಂದಿದ್ದು, ಕಡಲೆ ಬೆಲೆ ಕುಸಿಯುತ್ತಿದ್ದು, ಮತ್ತೊಂದು ಕಡೆ ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿ ಕಡಲೆ ಖರೀದಿ ಮಾಡುವ ಬಗ್ಗೆ ಹೇಳಿದ್ದರೂ, ಇದುವರೆಗೆ ಖರೀದಿ ಕೇಂದ್ರ ತೆರೆದಿಲ್ಲ ಎಂಬುದು ರೈತರ ಆರೋಪವಾಗಿದೆ. 

ADVERTISEMENT

ಮೊದಲ ಮಳೆ ಹರ್ಷ

ಮುಂಡರಗಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಸಂಜೆ ಸಾಧಾರಣ ಮಳೆ ಸುರಿದಿದ್ದು, ವರ್ಷದ ಮೊದಲ ಮಳೆಯನ್ನು ಕಂಡು ಸಾರ್ವಜನಿಕರು ಪುಳಕಿತರಾದರು.

ಸೋಮವಾರ ಸಂಜೆ 6.50 ಗಂಟೆಗೆ ಆರಂಭವಾದ ಸಾಧಾರಣ ಮಳೆಯು ಸುಮಾರು ಇಪ್ಪತ್ತು ನಿಮಿಷಕ್ಕೂ ಹೆಚ್ಚು ಕಾಲ ಸುರಿಯಿತು. ಪಟ್ಟಣದ ವಿವಿಧ ಭಾಗಗಳ ಮನೆಗಳ ಹರಿನಾಳಿಗೆಗಳಿಂದ ನೀರು ಹರಿಯಿತು. ಅಲ್ಪ ಕಾಲ ಸುರಿದ ಮಳೆಯು ಇಳೆಯನ್ನು ತಂಪುಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.