ಮುಳಗುಂದ: ಇಲ್ಲಿನ ಕೃಷಿ ಸಹಕಾರಿ ಸಂಘದಲ್ಲಿ ಗುರುವಾರ ಪೂರೈಕೆಯಾಗಿದ್ದ ಯೂರಿಯಾ ರಸಗೊಬ್ಬರ ಸಮರ್ಪಕವಾಗಿ ಸಿಗದ ಕಾರಣ ರೈತರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಗೋವಿನ ಜೋಳ, ಶೇಂಗಾ, ಹತ್ತಿ ಹಾಗೂ ಹೆಸರು ಬೆಳೆಗಳಿಗೆ ಅಗತ್ಯವಿರುವ ಯೂರಿಯಾ ರಸಗೊಬ್ಬರದ ಅಭಾವ ಉಂಟಾಗಿದೆ. ಸ್ಥಳೀಯ ಆಗ್ರೋ ಕೇಂದ್ರಗಳಿಗೆ ಕೇವಲ 400 ಚೀಲಗಳು ಮಾತ್ರ ಗೊಬ್ಬರ ಬಂದಿದ್ದು, 500ಕ್ಕೂ ಹೆಚ್ಚು ರೈತರು ಖರೀದಿಗೆ ಬಂದಿದ್ದರು. ನೂರಾರು ರೈತರಿಗೆ ಗೊಬ್ಬರ ಸಿಗದೇ ನಿರಾಸೆ ಉಂಟಾಯಿತು.
‘ಪಟ್ಟಣಕ್ಕೆ ಸುಮಾರು 200 ಟನ್ ಯೂರಿಯಾ ರಸಗೊಬ್ಬರ ಅಗತ್ಯವಿದ್ದು, ಶೇ. 50ರಷ್ಟು ಗೊಬ್ಬರ ಪೂರೈಕೆಯಾಗಿಲ್ಲ. ಸತತ ಮಳೆಯಿಂದ ಭೂಮಿ ತೇವವಾಗಿದ್ದು ಬೆಳೆಗಳು ಕುಂಠಿತಗೊಂಡಿವೆ. ಕೃಷಿ ಇಲಾಖೆ ರಸಗೊಬ್ಬರ ಪೂರೈಸುವಲ್ಲಿ ನಿರ್ಲಕ್ಷ್ಯ ವಹಿಸಿದೆ’ ಎಂದು ಸರ್ಕಾರದ ವಿರುದ್ದ ರೈತ ವಾಸು ಹರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.